ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸವಾರ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಅಂಬಾಗಿಲು ಪೆರಂಪಳ್ಳಿ ಕ್ರಾಸ್ ಬಳಿಯ ನ್ಯೂ ಜಯಲಕ್ಷ್ಮೀ ಸ್ಟೀಲ್ಸ್ ಎದುರುಗಡೆ ಸಂಭವಿಸಿದೆ.

ಮೃತನನ್ನು ಉಡುಪಿ ಸಿಟಿ ಬಸ್ ಚಾಲಕ ಸಂದೀಪ್ ಎಂದು ಗುರುತಿಸಲಾಗಿದೆ. ಇವರು ಮೂಲತಃ ಸಾಗರ ತಾಲೂಕಿನವರಾಗಿದ್ದು, ಅವಿವಾಹಿತರಾಗಿದ್ದಾರೆ. ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಂಬಾಗಿಲು-ಕಲ್ಸಂಕ ರಸ್ತೆಯಲ್ಲಿ ಏಕಮುಖ ಸಂಚಾರದ ವ್ಯವಸ್ಥೆ ಮಾಡಲಾಗಿದೆ.

ಕಲ್ಸಂಕ ಕಡೆಯಿಂದ ಅಂಬಾಗಿಲು ಕಡೆಗೆ ತೆರಳುತ್ತಿದ್ದ ಸಂದೀಪ್ ಹಾಗೂ ಅಂಬಾಗಿಲು ಕಡೆಯಿಂದ ಕಲ್ಸಂಕ ಕಡೆಗೆ ತೆರಳುತ್ತಿದ್ದ ದೇವೆಂದ್ರ ಶೆಣೈ ಎಂಬವರ ದ್ವಿಚಕ್ರ ವಾಹನ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದು, ಇದರಿಂದ ಇಬ್ಬರು ಸವಾರರು ಬೈಕ್ ಸಮೇತ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.

ಸಂದೀಪ್ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದರೆ, ದೇವೇಂದ್ರ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ರಭಸಕ್ಕೆ ಎರಡು ಬೈಕ್ಗಳು ಜಖಂಗೊಂಡಿವೆ. ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



