ದಕ್ಷಿಣ ಕನ್ನಡ : ಆದಿ ದ್ರಾವಿಡ ಭಾಷೆಗಳಲ್ಲಿ ತುಳುವಿಗೆ ಮೇರುಸ್ತಾನವಿದೆ, ತುಳು ಕರಾವಳಿ ಕರ್ನಾಟಕದ ಆಡು ಭಾಷೆ ಮತ್ತು ಮುಖ್ಯ ಭಾಷೆ, ತುಳುವಿಗಾಗಿ ಹಲವರು ಭಾಷಾ ಹೋರಾಟಗಳು ನಡೆಸಿದ ನಿದರ್ಶನಗಳಿವೆ, ತುಳುವಿಗಾಗಿ ಸ್ವಂತ ಲಿಪಿ ಇದೆ, ವೆಂಕಟರಾಜ ಪುಣಚಿತ್ತಾಯ, ಮಂದಾರ ಕೇಶವ ಭಟ್, ಕೆದಂಬಾಡಿ ಜತ್ತಪ್ಪ ರೈ, ಹೀಗೆ ಹಲವು ಕರಾವಳಿಗರು ತುಳು ಭಾಷೆಯಲ್ಲಿ ಅಪ್ರತಿಮ ಸಾಧನೆಯನ್ನು ಮಾಡಿದ್ದಾರೆ, ಮಂದಾರ ಕೇಶವ ಭಟ್ಟರು “ತುಳು ವಾಲ್ಮೀಕಿ” ಎಂದೇ ಪರಿಚಿತರು, ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸಬೇಕು ಎನ್ನುವ ಒತ್ತಾಯಗಳು ಊರ್ಜಿತದಲ್ಲಿರುವ ಸಮಯದಲ್ಲಿ ತುಳು ಭಾಷೆ, ಲಿಪಿಯಲ್ಲಿ ಹಲವಾರು ಕೃತಿಗಳು ಬರಲಾರಂಭಿಸಿದೆ. ಸಾಲಿಗೆ ಇನ್ನೊಂದು ಹೊಸ ಪ್ರಯತ್ನ ಸೇರ್ಪಡೆಗೊಂಡಿದೆ. ಪುತ್ತೂರಿನ ಮಹಿಳೆಯೊಬ್ಬರು ತುಳುವಿನಲ್ಲಿ ಭಗವದ್ಗೀತೆಯನ್ನ ಬರೆದು ಸಾಧನೆಯನ್ನು ಮಾಡಿದ್ದಾರೆ , ಅವರ ಹೆಸರು ಅಪರ್ಣ ಕೋಡಂಕೇರಿ ಇಂದು ಮಾಧ್ಯಮಗಳಲ್ಲಿ ವರದಿಯಾಗಿದೆ ಪುತ್ತೂರಿನ ನರಿಮೊಗರು ಸಮೀಪದ ಕೊಡಂಕೇರಿ ನಿವಾಸಿ ಭರತನಾಟ್ಯ ಪರಿಣತೆಯಾಗಿರುವ ಅಪರ್ಣಾ ಕೊಡಂಕೇರಿ ಈ ಸಾಧನೆ ಮಾಡುವ ಮೂಲಕ ತುಳು ಭಾಷೆ ಹಾಗೂ ಸಾಹಿತ್ಯಕ್ಕೆ ಇನ್ನೊಂದು ಗರಿಯನ್ನು ಜೋಡಿಸಿದ್ದಾರೆ. ಹಿಂದೂ ಧರ್ಮಗ್ರಂಥವಾದ ‘ಮಹಾಭಾರತ’ದ ಭಾಗವಾದ ‘ಭಗವದ್ಗೀತೆ’ಯನ್ನು ತುಳು ಲಿಪಿಯನ್ನು ಬಳಸಿ ಅನುವಾದಿಸಿದ್ದು, ಈ ಪುಸ್ತಕವನ್ನು ಶ್ರೀ ಕ್ಷೇತ್ರ ನರಸಿಂಹ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಗಳು, ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಮತ್ತು ಸುಬ್ರಹ್ಮಣ್ಯ ಮಠದ ವೇದವ್ಯಾಸ ಸಂಶೋದನಾ ಕೇಂದ್ರದ ಆನಂದತೀರ್ಥ ಸಗ್ರಿ ಅವರ ಸಮ್ಮುಖದಲ್ಲಿ ಇತ್ತೀಚೆಗೆ ಪುಸ್ತಕ ಬಿಡುಗಡೆ ಮಾಡಲಾಗಿದೆ. ಮಹಾಭಾರತದಲ್ಲಿ ಶ್ರೀ ಕೃಷ್ಣ ಭೋಧಿಸಿದ ಭಗವದ್ಗೀತೆಯನ್ನು ತುಳು ಭಾಷೆ ಮತ್ತು ಲಿಪಿಯಲ್ಲಿ ಬರೆಯಲಾಗಿದೆ. ತುಳು ಮಾತೃಭಾಷೆಯ ಜನಕ್ಕೆ ತುಳುವಲ್ಲಿ ಬರೆದರೆ, ಹೆಚ್ಚು ಪರಿಣಾಮಕಾರಿ ಅದು ಹೃದಯಕ್ಕೆ ತೀರಾ ಹತ್ತಿರವಾಗಿರುತ್ತೆ ಅನ್ನೋ ಕಾರಣಕ್ಕೆ ಭಗವದ್ಗೀತೆಯ 18 ಶ್ಲೋಕದ ಸಾರ ಹಾಗೂ ತಾತ್ಪರ್ಯಗಳನ್ನು ತುಳು ಲಿಪಿ ಮತ್ತು ಕನ್ನಡ ಲಿಪಿಯನ್ನು ಬಳಸಿ ತುಳುವಲ್ಲಿ ಬರೆಯಲಾಗಿದೆ ಎನ್ನುವುದು ಲೇಖಕಿಯ ಅಭಿಪ್ರಾಯ. ಮತ್ತು ಅದುವೇ ಸತ್ಯ. ತುಳು ಲಿಪಿಯಲ್ಲಿ ಭಗವದ್ಗೀತೆಯನ್ನು ಬರೆದಿರುವುದು ಇದೇ ಮೊದಲಾಗಿದ್ದು, ತುಳು ಭಾಷೆಯ ಬೆಳವಣಿಗೆಗೆ ಅಪರ್ಣಾ ಕೊಡಂಕೇರಿ ತಮ್ಮದೇ ಆದ ಅಪ್ರತಿಮ ಕೊಡುಗೆಯನ್ನು ತುಳು ಭಗವದ್ಗೀತೆಯ ಮೂಲಕ ನೀಡಿದ್ದಾರೆ.



