ನಮ್ಮ ಸಮಾಜದಲ್ಲಿ ಅಸಮಾನತೆ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇವರು ನಾಗ್ಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, 1947ರಲ್ಲಿ ಭಾರತದಿಂದ ಪ್ರತ್ಯೇಕಗೊಂಡವರು ಈಗ ತಾವು ತಪ್ಪು ಮಾಡಿದ್ದೇವೆ ಎಂದು ಭಾವಿಸುತ್ತಿರುವಂತೆ, ಇಂದಿನ ಯುವಪೀಳಿಗೆ ವಯಸ್ಕರಾಗುವ ಮೊದಲು ಅಖಂಡ ಭಾರತ ಅಥವಾ ಅವಿಭಜಿತ ಭಾರತದ ಕನಸು ನನಸಾಗಲಿದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮವರನ್ನೇ ನಾವು ಕತ್ತಲೆಯಲ್ಲಿ ಇರಿಸಿದ್ದೇವೆ. ನಾವು ಅವರ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲ. ಇದರ ಪರಿಣಾಮ ಇದು 2000 ವರ್ಷಗಳವರೆಗೂ ಮುಂದುವರೆದಿದ್ದು, ನಾವು ಅವರಿಗೆ ಸಮಾನತೆಯನ್ನು ನೀಡುವವರೆಗೆ, ಕೆಲವು ವಿಶೇಷ ಪರಿಹಾರಗಳನ್ನು ಒದಗಿಸಬೇಕಾಗುತ್ತದೆ. ಇದರಲ್ಲಿ ಮೀಸಲಾತಿಯೂ ಕೂಡಾ ಒಂದು. ನಮ್ಮ ಸಮಾಜದಲ್ಲಿ ತಾರತಮ್ಯ ಹೋಗಿಲ್ಲ. ಅಸಮಾನತೆ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು. ನಾವು ಸಂವಿಧಾನದಲ್ಲಿ ಒದಗಿಸಿರುವ ಮೀಸಲಾತಿಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತೇವೆ. ಮೀಸಲಾತಿ ಎಂದರೆ ಗೌರವವನ್ನು ನೀಡುವುದಾಗಿದೆ. ಇದು ಆರ್ಥಿಕ ಅಥವಾ ರಾಜಕೀಯ ಸಮಾನತೆಯನ್ನು ಖಚಿತಪಡಿಸುವ ವಿಷಯವಲ್ಲ ಎಂದು ಭಾಗವತ್ ಹೇಳಿದ್ದಾರೆ.



