ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳ ಪ್ರಾರಂಭದ ಮುನ್ನ ಈ ಭಾಗದ ಧಾರಣಾ ಸಾಮರ್ಥ್ಯ ಅಧ್ಯಯನ ಅಗತ್ಯವಿದೆ. ಧಾರಣ ಸಾಮರ್ಥ್ಯದ ಅಧ್ಯಯನ ನಡೆಸಿ ಸಮಗ್ರ ವರದಿ ನೀಡುವಂತೆ ಸ್ಥಳೀಯ ಪ್ರಾಧಿಕಾರದ ಸಮಿತಿಗೆ ಸೂಚಿಸಲಾಗಿದೆ ಎಂದು ವಿಧಾನ ಪರಿಷತ್ನ ಸರಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಬಿ.ಎಂ.ಫಾರೂಕ್ ಅವರು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬೃಹತ್ ಯೋಜನೆಗಳು ಇಲ್ಲಿ ಸ್ಥಳೀಯರ ಗಮನಕ್ಕೆ ಬರದೆ ಸ್ಥಾಪನೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಭೌಗೋಳಿಕ ಮತ್ತು ಪ್ರಾಕೃತಿಕ ಸಾಮರ್ಥ್ಯದ ಬಗ್ಗೆ ಸಮಿತಿ ರಚಿಸಿ ಅಧ್ಯಯನ ನಡೆಸುವಂತೆ ಸ್ಥಳೀಯ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಈ ಸಮಿತಿ ವರದಿಯನ್ನು ಅಧ್ಯಯನ ನಡೆಸಿ ಬಳಿಕ ಸರಕಾರಕ್ಕೂ ಸಲ್ಲಿಸಲಿದೆ. ಕೈಗಾರಿಕೆಗಳಿಂದ ಉಂಟಾಗುವ ಪರಿಸರ, ಮಾಲಿನ್ಯ ಮತ್ತಿತರ ಅಂಶಗಳ ಕುರಿತು ಸ್ವತಂತ್ರ ಅಧ್ಯಯನ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ನೀರಿ ಸಂಸ್ಥೆಗೆ ಸೂಚಿಸಲಾಗಿತ್ತು. ಅದರಂತೆ ನೀರಿ ಸಂಸ್ಥೆ ಗುರುವಾರ ವರದಿ ಸಲ್ಲಿಸಿದೆ. ಅದನ್ನು ಸಮಿತಿ ಇನ್ನಷ್ಟೆ ಪರಿಶೀಲಿಸಬೇಕಿದೆ ಜೋಕಟ್ಟೆ ಪರಿಸರದಲ್ಲಿ ಕೈಗಾರಿಕಾ ಕಲುಷಿತ ವಾತಾವರಣ ಬಗ್ಗೆಯೂ ಸ್ಥಳೀಯರು ದೂರು ನೀಡಿದ್ದು, ಆ ಬಗ್ಗೆಯೂ ಗಮನ ಹರಿಸುವಂತೆ ಸೂಚಿಸಲಾಗಿದೆ ಎಂದರು.
ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಎಂಆರ್ಪಿಎಲ್ಗೆ ಸೂಚನೆ ನೀಡಿದ್ದು,. 5ನೇ ಹಂತ ಅನುಷ್ಠಾನ ವೇಳೆ ಸಂಸದ ರೊಂದಿಗೆ ಚರ್ಚಿಸಿ ಎ ಹಾಗೂ ಬಿ ಗ್ರೇಡ್ ಹುದ್ದೆಗಳಿಗೂ ಸ್ಥಳೀಯರನ್ನೇ ನೇಮಿಸುವಂತೆ ತಿಳಿಸಲಾಗಿದೆ. ಪ್ರಸಕ್ತ 650 ಮಂದಿ ಸ್ಥಳೀಯರಿಗೆ ಉದ್ಯೋಗ ನೀಡಿದ್ದರೂ ಅದು ಸಿ ಮತ್ತು ಡಿ ದರ್ಜೆಯದ್ದು ಎಂದರು.
ಮಂಗಳೂರಿನಲ್ಲಿ ಭೂಗತ ತೈಲ ಸಂಗ್ರಹಾ ಗಾರ ಬಳಿಕ ಇನ್ನೊಂದು ಬೃಹತ್ ಭೂಗತ ಸುರಂಗ ರಚನೆಯಾಗುತ್ತಿದೆ. ಇನ್ನು ಐದಾರು ತಿಂಗಳಲ್ಲಿ ಈ ಸುರಂಗ ಕಾಮಗಾರಿ ಪೂರ್ಣಗೊಳ್ಳಲಿದೆ. ಎಚ್ಪಿಸಿಎಲ್ ಕಂಪೆನಿಯು ಎಲ್ಪಿಜಿ ಅನಿಲ ಸಂಗ್ರಹಕ್ಕೆ ಈ ಸುರಂಗ ನಿರ್ಮಿಸುತ್ತಿದೆ.
ನಿಯೋಗ ಗುರುವಾರ ಈ ಸುರಂಗ ನಿರ್ಮಾಣ ಕಾಮಗಾರಿ ವೀಕ್ಷಿಸಿದೆ. ಭೂಮಿಯ ಮೇಲ್ಸ್ತರದಿಂದ ಸುಮಾರು 500 ಅಡಿ ಆಳದಲ್ಲಿ ಬಂಡೆಯನ್ನೇ ಕೊರೆದು ಸುರಂಗ ನಿರ್ಮಿಸುತ್ತಿದ್ದು, ಎಲ್ಪಿಜಿ ಗ್ಯಾಸ್ ಶೇಖರಣೆ ಇದರ ಗುರಿಯಾಗಿದೆ. ಈಗಾಗಲೇ ಪೆರ್ಮುದೆಯಲ್ಲಿ ತೈಲ ಸಂಗ್ರಹಾಗಾರದ ಸುರಂಗ ಇದೆ ಎಂದರು.



