ಬಂಟ್ವಾಳ: ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆಯ ಕುರಿತು ಗ್ರಾ.ಪಂ.ಅಧ್ಯಕ್ಷರು ,ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಜಿ.ಪಿ.ಎಲ್.ಎಫ್ ಅಧ್ಯಕ್ಷರು ,ಎಂ.ಬಿ.ಕೆ.ಮತ್ತು ಎಲ್.ಸಿ.ಆರ್.ಪಿ.ರವರುಗಳಿಗೆ ತರಬೇತಿ ಕಾರ್ಯಗಾರ ತಾ.ಪಂ.ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಯರಾಮ್ ಮಾತನಾಡಿ, ತ್ಯಾಜ್ಯ ಮುಕ್ತ ಗ್ರಾಮವಾಗಿ ಪರಿವರ್ತನೆ ಮಾಡಲು ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರತಿಯೊಬ್ಬರು ಪ್ರತಿಜ್ಞೆ ಮಾಡಬೇಕಾಗಿದೆ.

ಪ್ಲಾಸ್ಟಿಕ್ ಬಳಕೆಯನ್ನು ಮಾಡುವುದು ಪೂರ್ಣವಾಗಿ ನಿಷಿದ್ಧ ಮಾಡುತ್ತೇವೆ, ಮನೆಗೆ ಕಡ್ಡಾಯವಾಗಿ ಪ್ಲಾಸ್ಟಿಕ್ ಚೀಲ ಸಹಿತ ಯಾವುದೇ ವಸ್ತುಗಳನ್ನು ತರುವುದಿಲ್ಲ ಎಂಬುದನ್ನು ಪ್ರತಿಯೊಬ್ಬ ವ್ಯಕ್ತಿಯು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ಪ್ಲಾಸ್ಟಿಕ್ ಮುಕ್ತ ಮನೆಯಾಗಿ ಬದಲಾವಣೆ ಮಾಡಬಹುದು.
ಯಾವುದೇ ವಸ್ತುಗಳ ಬಳಕೆ ನಿಷೇಧ ಮಾಡಲು ಒತ್ತಾಯ ಪೂರ್ವಕವಾಗಿ ಮಾಡಲು ಅಸಾಧ್ಯ. ಬದಲಾಗಿ ಮನಪರಿವರ್ತನೆ ಮೂಲಕ ಇಂತಹ ನಿಷೇಧಗಳು ಯಶಸ್ವಿಯಾಗಲು ಸಾಧ್ಯ ಎಂದು ಅವರು ತಿಳಿಸಿದರು.
ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ಭಯಾನಕ ರೋಗಗಳ ಹೆಚ್ಚಾಗುವ ಸಾಧ್ಯತೆ ಇರುವ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡುವ ಕೆಲಸಗಳು ಆಗಬೇಕಾಗಿದೆ.

ಈ ನಿಟ್ಟಿನಲ್ಲಿ ಜನರಿಗೆ ಸರಿಯಾದ ಮಾಹಿತಿ ನೀಡಿ ಆರೋಗ್ಯ ರಕ್ಷಣೆಯ ಜವಬ್ದಾರಿಯ ಬಗ್ಗೆ ತಿಳಿಸುವ ,ಚಿಂತನೆಯ ಕಾರ್ಯಕ್ರಮಗಳು ನಡೆಯಬೇಕು ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯತ್ ನ ಜವಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಗಳು ತ್ಯಾಜ್ಯ ಮುಕ್ತ,ಪ್ಲಾಸ್ಟಿಕ್ ಮುಕ್ತ ಗ್ರಾಮ ನಿರ್ಮಾಣದ ಗುರಿಯನ್ನು ಸಾಧಿಸಲು ಅಧಿಕಾರಿಗಳ ಜೊತೆಯಾಗಿ ಕೆಲಸ ಮಾಡಿ ಎಂದು ಅವರು ತಿಳಿಸಿದರು.
ತಾ.ಪಂ. ಆಡಳಿತಾಧಿಕಾರಿ ಎಚ್.ಆರ್.ನಾಯಕ್, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ , ಸಹಾಯಕ ನಿರ್ದೇಶಕ ( ಗ್ರಾಮೀಣ ಉದ್ಯೋಗ) ದಿನೇಶ್ ಉಪಸ್ಥಿತರಿದ್ದರು.



