ಬಟ್ಟೆ ಅಂಗಡಿಯನ್ನು ತೆಗೆಸಿಕೊಳ್ಳುವುದಾಗಿ ನಂಬಿಸಿ 5ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಮತ್ತೊಂದು ಆರೋಪ ಚೈತ್ರಾ ಕುಂದಾಪುರ ಮೇಲೆ ಬಂದಿದೆ.

ಈ ಕುರಿತು ಕೋಟಾ ಠಾಣೆಯಲ್ಲಿ ಸಂತ್ರಸ್ತರು ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈಗಾಗಲೇ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ವಂಚನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಚೈತ್ರಾ ಕುಂದಾಪುರ ಬಂಧನಕ್ಕೊಳಗಾಗಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ವಂಚನೆ ಆರೋಪ ಕೇಳಿ ಬಂದಿದೆ. ಉಡುಪಿಯಲ್ಲಿ ವ್ಯಕ್ತಿಯೊಬ್ಬರಿಗೆ ಬಟ್ಟೆ ಅಂಗಡಿ ತೆರೆಯಲು ಅಗತ್ಯ ಅನುಮತಿ, ವ್ಯವಸ್ಥೆ ಮಾಡಿಕೊಡುವುದಾಗಿ ಚೈತ್ರಾ ಕುಂದಾಪುರ ನಂಬಿಕೆ ಬರುವಂತೆ ಮಾಡಿದ್ದಳು. ನಂಬಿಸಿ ಐದು ಲಕ್ಷ ಹಣ ಪಡೆದು ಆ ನಂತರ ಬೆದರಿಸಿ ಹಣ ನೀಡದೆ ವಂಚನೆ ಮಾಡಿದ್ದಾರೆ ಎಂದು ಸಂತ್ರಸ್ತ ಆರೋಪಿಸಿದ್ದಾರೆ.
ಸುಧೀನ ಪೂಜಾರಿ ಕೋಡಿ ಎಂಬವರು ವಂಚನೆಗೊಳಗಾದ ವ್ಯಕ್ತಿಯಾಗಿದ್ದು, 2015ರಲ್ಲಿ ಸಮಾವೇಶ ಒಂದರಲ್ಲಿ ಸುಧೀನ ಪೂಜಾರಿ ಅವರಿಗೆ ಚೈತ್ರಾ ಕುಂದಾಪುರ ಪರಿಚಯವಾಗಿದೆ. ರಾಜಕೀಯ ವ್ಯಕ್ತಿಗಳ ಬಳಿ ಕರೆದುಕೊಂಡು ಹೋಗಿ ನಂಬಿಸಿದ್ದ ಚೈತ್ರಾ, 2018-2023 ರ ಅವಧಿಯಲ್ಲಿ ಅಂಗಡಿ ನಿರ್ಮಾಣಕ್ಕೆ ಐದು ಲಕ್ಷ ಹಣವನ್ನು ಹಂತ ಹಂತವಾಗಿ ಪಡೆದಿದ್ದಾಳೆ. ಮೂರು ಲಕ್ಷವನ್ನ ಚೈತ್ರಾ ಖಾತೆಗೆ ವರ್ಗಾಯಿಸಿದ್ದ ಸುಧೀನ, ಉಳಿದ ಎರಡು ಲಕ್ಷ ಹಣವನ್ನ ನಗದು ರೂಪದಲ್ಲಿ ನೀಡಿದ್ದರು.
ಸುಧೀನ ಅವರು ಕೇಳಿದ ಸಂದರ್ಭದಲ್ಲಿ ಕೊನೆಯ ಹಂತದಲ್ಲಿದೆ ಎಂದು ಸುಳ್ಳು ಹೇಳುತ್ತಿದ್ದ ಚೈತ್ರಾ, ಚುನಾವಣಾ ಪ್ರಚಾರ, ಭಾಷಣ, ಕಾರ್ಯಕಾರಣಿ ಸಭೆ, ಪಕ್ಷದ ಮುಖಂಡರ ಭೇಟಿ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಅನುಮಾನಗೊಂಡ ಸುಧೀನ ಕೂಡಲೇ ಬಟ್ಟೆ ಅಂಗಡಿಗೆ ಒತ್ತಾಯಿಸಿದ. ಈ ವೇಳೆ ಸುಳ್ಳು ಅತ್ಯಾಚಾರ ಪ್ರಕರಣ ಹಾಕುತ್ತೇನೆ ಬೆದರಿಕೆ ಹಾಕಿದ್ದಾರೆ. ನನ್ನ ಮತ್ತೊಬ್ಬ ಸ್ನೇಹಿತ ಕೂಡಾ 1 ಲಕ್ಷ ಸಾಲ ಮಾಡಿ ಹಣ ನೀಡಿದ್ದಾರೆ. ಈಗ ಲೋನ್ ಅವನ ಹೆಸರಿನಲ್ಲಿ ಹಣ ಅವಳ ಹತ್ತಿರ ಇದೆ. ಇಂತಹ ಮೋಸದಲ್ಲಿ ತುಂಬಾ ಮಂದಿ ಸಿಕ್ಕಿಬಿದ್ದಾರೆ. ಅವರೆಲ್ಲಾ ಬಂದು ದಾಖಲೆ ಸಮೇತ ದೂರು ನೀಡಬೇಕು ಎಂದು ಸಂತ್ರಸ್ತ ಯುವಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸದ್ಯ ಸುಧೀನ ಪೂಜಾರಿ ಅವರು ಈ ಬಗ್ಗೆ ಬ್ರಹ್ಮಾವರ ವೃತ್ತ ವ್ಯಾಪ್ತಿಯ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಚೈತ್ರಾ ವಿರುದ್ಧ 506 417, 420 ಐಪಿಸಿ ಸೆಕ್ಷನ್ ಅಡಿ ಎಫ್ಐಆರ್ ದಾಖಲಿಸಿದ್ದಾರೆ.



