ಮಂಗಳೂರು: ರಾಜ್ಯದಾದ್ಯಂತ ಹವಾಮಾನ ವೈಪರೀತ್ಯವಾಗುತ್ತಿದ್ದು ಕರಾವಳಿಯಾದ್ಯಂತ ಭಾನುವಾರ ಇಡೀ ದಿನ ಮೋಡ ಕವಿದ ವಾತಾವರಣ, ಗ್ರಾಮೀಣ ಭಾಗದ ಕೆಲವು ಕಡೆ ತುಂತುರು ಮಳೆ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಇಂದು (ಸೋಮವಾರ) ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮಂಗಳೂರಿನಲ್ಲಿ ಭಾನುವಾರ ಹಗಲು ಹೊತ್ತು ಮಳೆ ಬಾರದಿದ್ದರೂ ಆಗಾಗ ತುಂತುರು ಮಳೆ ಹನಿದಿದೆ. ಉಳಿದಂತೆ ಮೋಡ ಕವಿದು ಮಳೆಯ ವಾತಾವರಣ ಕಂಡುಬಂದಿತ್ತು. ಇತ್ತೀಚೆಗೆ ಹವಾಮಾನದ ಅಸಮತೋಲನದಿಂದಾಗಿ ಜನರಲ್ಲಿ ಶೀತ ಬಾಧೆ, ಜ್ಚರ ಕಾಣಿಸಿಕೊಳ್ಳುತ್ತಿದ್ದು ಡೆಂಗ್ಯೂ ಭೀತಿ ಕೂಡಾ ಆರಂಭವಾಗಿದೆ. ಇನ್ನು ಉಳ್ಳಾಲದಲ್ಲಿ ಭಾನುವಾರ ಗರಿಷ್ಠ 55.1 ಮಿಲಿ. ಮೀಟರ್ ಮಳೆಯಾಗಿದ್ದು ಜಿಲ್ಲೆಯ ಸರಾಸರಿ ಮಳೆ 38.9 ಮೀ.ಮೀ ಆಗಿದೆ.



