ದಕ್ಷಿಣ ಕನ್ನಡ : ಅಭಿವೃದ್ಧಿಯ ರೋಗದಲ್ಲಿ ಹಳ್ಳಿಗಳು ನಗರಗಳಾಗುತ್ತಿವೆ, ನಗರೀಕರಣದಿಂದ ಪರಿಸರ ನಾಶವಾಗುತ್ತಿದೆ, ಪ್ಲಾಸ್ಟಿಕ್ ತ್ಯಾಜ್ಯದಿಂದ ಭೂಮಿ ನರಕ ಯಾತನೆ ಅನುಭವಿಸುತ್ತಿದೆ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ದಿನನಿತ್ಯ ಸಾವಿರಾರು ಟನ್ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯಗಳು ನದಿಗೆ ಸೇರಿ ಅಲ್ಲಿಂದ ಸಮುದ್ರ ಸೇರುತ್ತಿವೆ, ಇವೆಲ್ಲದರ ನಡುವೆ ನಮ್ಮ ಅಸಮರ್ಪಕ, ಪರಿಸರಕ್ಕೆ ಪ್ರತಿಕೂಲ ಪರಿಣಾಮ ಬೀರುವ ಅಭಿವೃದ್ಧಿ ಏಗ್ಗಿಲ್ಲದೆ ಸಾಗಿದೆ, ಮಾನವ ಕೊನೆಯ ಮೊಳೆ ಹೊಡೆಯುವ ದಿವಸ ದೂರವಿಲ್ಲ ಎಂಬುದು ವಾಸ್ತವ ಸತ್ಯ.

ಮಂಗಳೂರು ನಗರದ ಕೆಪಿಟಿ ಹಾಗೂ ನಂತೂರು ಜಂಕ್ಷನ್ಗಳಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿ ಸಲುವಾಗಿ ಹೆದ್ದಾರಿ ಬದಿಯ ಮರಗಳನ್ನು ಕಡಿಯುವುದನ್ನು ವಿರೋಧಿಸಿ ಪರಿಸರವಾದಿಗಳು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ವಿವಿಧ ಪರಿಸರ ಸಂಘಟನೆಯ ಕಾರ್ಯಕರ್ತರು ಪದವು ಹೈಸ್ಕೂಲ್ ಬಳಿ ಮರಗಳನ್ನು ಕಡಿಯುತ್ತಿರುವ ಪ್ರದೇಶದ ಬಳಿ ನಿಂತು ಪ್ರತಿಭಟನೆ ನಡೆಸಿದರು. ವಿವಿಧ ಪರಿಸರ ಸಂಘಟನೆಗಳ ಆಕ್ಷೇಪದ ಹೊರತಾಗಿಯೂ ಹೆದ್ದಾರಿ ಪಕ್ಕದ ಮರಗಳನ್ನು ಕಡಿಯಲು ಅನುಮತಿ ನೀಡಲಾಗಿದೆ. ಈ ಕಾಮಗಾರಿಯಿಂದ ಪರಿಸರದ ಮೇಲಾಗುವ ಪರಿಣಾಮದ ಅಧ್ಯಯನ ನಡೆಸುವಂತೆ ಒತ್ತಾಯಿಸಿದರೂ ಕಿವಿಗೊಟ್ಟಿಲ್ಲ. ಈಗ ಇರುವ ಮರಗಳನ್ನು ಕಡಿಯುವ ಬದಲು ಅದನ್ನು ಶಿಫ್ಟ್ ಮಾಡಿ ಅಂದರು ಕೂಡ ಯಾವುದೇ ರೀತಿಯ ಸ್ಪಂದನೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಇದ್ಯಾವುದೂ ಬೇಕಿಲ್ಲ ಬೇಕಿರೋದೊಂದೇ ಅಭಿವೃದ್ಧಿ, ತನ್ಮೂಲಕ ಸ್ವಯಂ ಅಭಿವೃದ್ಧಿ ಆಗುವುದೇ ಕನಸು ಎಂದು ಲೇಬಡಿ ಮಾಡಿದ್ದಾರೆ.
ಜಿಲ್ಲಾಡಳಿತಕ್ಕೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಾಗೂ ಅರಣ್ಯ ಇಲಾಖೆಗೆ ಪರಿಸರ ಸಂರಕ್ಷಣೆಯ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದೆಯೇ’ ಎಂದು ಪರಿಸರ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಪರಿಸರವಾದಿಗಳು, ಕಡಿದ ಮರಕ್ಕೆ ಶವ ಸಂಸ್ಕಾರ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರತಿಭಟನೆ ವೇಳೆ ವಿವಿಧ ಶಾಲಾ ವಿಧ್ಯಾರ್ಥಿಗಳು ಪರಿಸರ ಪ್ರೇಮಿಗಳು ಭಾಗವಹಿಸಿದ್ದರು. ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮಾಡುತ್ತಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.



