ದಕ್ಷಿಣ ಕನ್ನಡ : ಐತಿಹಾಸಿಕ 34 ನೇ ವರ್ಷದ ಮಂಗಳೂರು ದಸರಾ ಅಕ್ಟೋಬರ್ 15ರಿಂದ ಶ್ರೀ ಕ್ಷೇತ್ರ ಕುದ್ರೊಳಿಯಲ್ಲಿ ಪ್ರಾರಂಭವಾಗುತ್ತಿದ್ದು ಸಿದ್ದತೆಗಳು ಭರದಿಂದ ಸಾಗಿವೆ. ಈ ಬಾರಿಯ ದಸರಾ ಸಿದ್ದತೆಗಳ ಬಗ್ಗೆ ದೇವಳದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ ಮಾಹಿತಿ ನೀಡಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಮಹೋತ್ಸವ ಕಳೆದ 33 ವರ್ಷಗಳಿಂದ ವರ್ಷಂಪ್ರತಿ ಕ್ಷೇತ್ರದಲ್ಲಿ ನಡೆಯುತ್ತಿದ್ದು ಈ ಬಾರಿಯೂ ವಿಶ್ವವಿಖ್ಯಾತ “ಮಂಗಳೂರು ದಸರಾ” ಬಿ. ಜನಾರ್ಧನ ಪೂಜಾರಿಯವರ ಮಾರ್ಗದರ್ಶನದಲ್ಲಿ ಇದೇ ತಿಂಗಳ ಅ.15ರಂದು ಶ್ರೀ ಗಣೇಶ, ನವದುರ್ಗೆ ಮತ್ತು ಶ್ರೀ ಶಾರದಾ ಮಾತೆಯ ಮೂರ್ತಿ ಪ್ರತಿಷ್ಠಾಪನೆಗೊಳಿಸಿ ಪ್ರಾರಂಭವಾಗಲಿದೆ” ಎಂದರು.

ಬಳಿಕ ಮಾತಾಡಿದ ಕೋಶಾಧಿಕಾರಿ ಪದ್ಮರಾಜ್ ಆರ್. ಅವರು, “ದಸರಾ ಮಹೋತ್ಸವವು ಅ.25ರವರೆಗೆ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿದ್ದು,ಅ. 24ರಂದು 4 ಗಂಟೆಗೆ ಸರಿಯಾಗಿ “ಮಂಗಳೂರು ದಸರಾ” ಮೆರವಣಿಗೆ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿಯವರ ಮಾರ್ಗದರ್ಶನದಲ್ಲಿ ಮಂಗಳೂರು ನಗರದ ರಾಜರಸ್ತೆಯಲ್ಲಿ ಸಾಗಿ ಶ್ರೀ ಕ್ಷೇತ್ರದ ಪುಷ್ಕರಿಣಿಯಲ್ಲಿ ಮೂರ್ತಿ ವಿಸರ್ಜನೆ ನಡೆಯಲಿದೆ.

ಮಂಗಳೂರು ದಸರಾ ಮೆರವಣಿಗೆಯಲ್ಲಿ ಜಿಲ್ಲೆ ಹಾಗೂ ರಾಜ್ಯದ ಹಲವಾರು ಕಡೆಗಳಿಂದ ಬರುವ ಭಾರತೀಯ ಸನಾತನ ಧರ್ಮದ, ಇತಿಹಾಸ ಭಾವದ ನೆನಪುಗಳನ್ನು ಸ್ಮರಿಸುವ ವಿಶೇಷ ಟ್ಯಾಬ್ ಗಳು ಭಾಗವಹಿಸಲಿದ್ದು ಈ ಸುಂದರ ಮೆರವಣಿಗೆ ವಿಶೇಷ ಮೆರುಗು ನೀಡಲಿದೆ. ಸಾಂಸ್ಕೃತಿಕ ಮೆರವಣಿಗೆ ಸಾಗುವ ರಸ್ತೆಯ ಎರಡೂ ಬದಿಗಳಲ್ಲಿರುವ ಎಲ್ಲಾ ಕಟ್ಟಡದ ಮಾಲಕರು ತಮ್ಮ ತಮ್ಮ ಕಟ್ಟಡಗಳನ್ನು ವಿದ್ಯುದ್ದೀಪದಿಂದ ಅಲಂಕರಿಸಿ “ಮಂಗಳೂರು ದಸರಾ” ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಹೇಳಿದರು.



