ದಕ್ಷಿಣ ಕನ್ನಡ : ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹೊಸಂಗಡಿಯಲ್ಲಿ ಕೃಷಿ ಮುಂಚೂಣಿ ಪ್ರಾತ್ಯಕ್ಷಿಕೆ 2023-24 ರ ಅಡಿಯಲ್ಲಿ ಭಾ.ಕೃ.ಅ.ಫ- ಕೃಷಿ ವಿಜ್ಞಾನ ಕೇಂದ್ರ (ದಕ್ಷಿಣ ಕನ್ನಡ) ಮಂಗಳೂರು, ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನ (ರಿ.) ಮಂಗಳೂರು ಹಾಗೂ ಪ್ರೆಂಡ್ಸ್ ಕ್ಲಬ್ (ರಿ.) ಹೊಸಂಗಡಿ ಇವರುಗಳ ಸಹಭಾಗಿತ್ವದಲ್ಲಿ ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕೆ ರೋಗದ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿಗಳಾದ ಡಾ. ಕೇದಾರನಾಥ ರವರು ಭಾಗವಹಿಸಿ ಎಲೆ ಚುಕ್ಕೆ ರೋಗದ ಹರಡುವಿಕೆ ಹಾಗೂ ಅದರ ನಿರ್ವಹಣೆ ಕುರಿತು ಮಾಹಿತಿ ನೀಡಿ, ಔಷಧೋಪಚಾರವಾಗಿ (ಪ್ರೋಪಿಕೊನಾಜೊಲ್ 25 % ಇಸಿ @1 ಮಿಲಿ ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಎಲೆ ಹಾಗೂ ಹಿಂಗಾರಕ್ಕೆ ಸಿಂಪರಣೆ ಮಾಡಬೇಕು ಹಾಗೆ 30 ದಿನಗಳ ನಂತರ ಕಾರ್ಬೆಂಡೇಜಿಮ್+ ಮ್ಯಾಂಕೋಜೆಬ್ 75 ಡಬ್ಲ್ಯೂ ಪಿ @ 2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಎಲೆ ಹಾಗೂ ಹಿಂಗಾರಕ್ಕೆ ಸಿಂಪರಣೆ ಮಾಡಬೇಕು ಎಂಬ) ಮಾಹಿತಿ ನೀಡಿದರು. ಡಾ.ಮಲ್ಲಿಕಾರ್ಜುನ್ ಎಲ್ ಮಣ್ಣು ವಿಜ್ಞಾನಿಗಳು ಮಣ್ಣು ಪರೀಕ್ಷೆ ಹಾಗೂ ಪೋಷಕಾಂಶಗಳ ನಿರ್ವಹಣೆ ಕುರಿತು ಹಾಗೂ ಡಾ. ರಶ್ಮಿ ಆರ್ ತೋಟಗಾರಿಕೆ ಬೆಳೆಗಳ ಕುರಿತು ಮಾಹಿತಿಯನ್ನು ನೀಡಿದರು. ಶ್ರೀ ಹರಿಪ್ರಸಾದ್ ರವರು ವಿಜ್ಞಾನಿಗಳನ್ನು ಹಾಗೂ ಕೃಷಿಕರನ್ನು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಒಟ್ಟು 22 ರೈತರು ಭಾಗವಹಿಸಿದ್ದರು ಹಾಗೂ ಆಯ್ದ 10 ರೈತರಿಗೆ ಕೃಷಿ ಪರಿಕಗಳನ್ನು ವಿತರಿಸಲಾಯಿತು.



