ಉಡುಪಿ:ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಬೋಗಸ್ ಕಾರ್ಡ್ ಹೆಚ್ಚಾಗಿವೆ ಎಂಬ ನೆಪವೊಡ್ಡಿ ಶೇ.75-80 ರಷ್ಟು ಸ್ಕಾಲರ್ ಶಿಪ್ ಕಡಿತ ಮಾಡಿರುವುದು ಖಂಡನೀಯ. ಬಡ ಕಾರ್ಮಿಕರ ಮಕ್ಕಳ ಸ್ಕಾಲರ್ ಶಿಪ್ ಮೊತ್ತದಲ್ಲಿ ಕಡಿತಗೊಳಿಸದೆ, ಈ ಹಿಂದೆ ನೀಡಲಾಗುತ್ತಿದ್ದ ಮೊತ್ತವನ್ನೇ ನೀಡಲು ರಾಜ್ಯ ಸರಕಾರ ತಕ್ಷಣವೇ ಕ್ರಮಕೈಕೊಳ್ಳಬೇಕು ಎಂದು ಕಟ್ಟಡ ಕಾರ್ಮಿಕ ಸಂಘಗಳ ಕುಂದಾಪುರ ತಾಲೂಕು ಅಧ್ಯಕ್ಷ ಸುರೇಶ್ ಕಲ್ಲಾಗರ ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1ರಿಂದ 4ನೇ ತರಗತಿಯ ಮಕ್ಕಳಿಗೆ ಹಿಂದೆ ಸಿಗುತ್ತಿದ್ದ 5 ಸಾವಿರ ರೂ. ಶೈಕ್ಷಣಿಕ ಧನಸಹಾಯವನ್ನು 1100 ರೂ. ಗೆ ಇಳಿಸಲಾಗಿದೆ. ಪ್ರೌಢಶಾಲೆ, ಪಿಯುಸಿ, ಪದವಿ, ಎಂಜಿನಿಯರಿoಗ್, ಡಿಪ್ಲೊಮಾ ಸಹಿತ ವಿವಿಧ ಕೋರ್ಸ್ ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾರ್ಮಿಕರ ಮಕ್ಕಳ ಸ್ಕಾಲರ್ಶಿಪ್ ಮೊತ್ತವನ್ನು ಕಡಿತ ಮಾಡಲಾಗಿದೆ. ಬೋಗಸ್ ಕಾರ್ಡ್ ಹೆಚ್ಚಳ ಎಂಬ ಕಾರಣವೊಡ್ಡಿ ಈ ರೀತಿ ನಿರ್ಧಾರ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಸುದ್ದಿಗೋಷ್ಠಿಯಲ್ಲಿ ಸಿಡಬ್ಲ್ಯುಎಫ್ ಐ ರಾಜ್ಯಾಧ್ಯಕ್ಷ ಬಾಲಕೃಷ್ಣ, ಸಮಿತಿಯ ಯು. ಶಿವಾನಂದ್, ಚಿಕ್ಕ ಮೊಗವೀರ, ಶಶಿಕಲಾ
ಉಪಸ್ಥಿತರಿದ್ರು.



