ದಕ್ಷಿಣ ಕನ್ನಡ: ಕರ್ನಾಟಕ ಜಾನಪದ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷರಾಗಿ ಪತ್ರಕರ್ತ, ಪರಿಸರ ಸಂರಕ್ಷಣೆ ಮತ್ತು ಪ್ರಗತಿಪರ ಕೃಷಿಕ ಡಾ. ಮಂದಾರ ರಾಜೇಶ್ ಭಟ್ಟರು ಆಯ್ಕೆಯಾಗಿದ್ದಾರೆ.

ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಇವರ ಮಾರ್ಗದರ್ಶನದಂತೆ ಕರ್ನಾಟಕ ಜಾನಪದ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಅಧಿಕೃತವಾಗಿ ಮಂದಾರ ರಾಜೇಶ್ ಭಟ್ಟರನ್ನು ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಪರಿಷತ್ತು ಉಪಾಧ್ಯಕ್ಷ ಎಂದು ಘೋಷಿಸಲಾಯಿತು.
ಮುಂದಿನ ತಿಂಗಳು ನಡೆಯಲಿರುವ ಜಾನಪದ ಉತ್ಸವ, ಹಾಗೂ ಜಾನಪದ ಪರಿಷತ್ತು ಕಾರ್ಯಕ್ರಮಗಳ ಹೆಚ್ಚಿನ ಪ್ರಸರಣಕ್ಕಾಗಿ, ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಪರಿಷತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ಹಾಗೂ ಹೆಚ್ಚಿನ ಕಾರ್ಯ ಕ್ಷಮತೆಯನ್ನು ಹೊಂದಲು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಗಳ ಕಾರ್ಯಕ್ಷಮತೆ ಪರಿಶೀಲನೆ ಮತ್ತು ಹೆಚ್ಚಿನ ಪ್ರೋತ್ಸಾಹ ನೀಡಲು ಬೆಂಗಳೂರು ಜಾನಪದ ಪರಿಷತ್ತು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಪರಿಷತ್ತು ನಿರ್ಧರಿಸಿದ್ದು, ಅಗತ್ಯವಿದ್ದ ಹಲವು ತಾಲೂಕುಗಳಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಮೂಡಬಿದ್ರೆ, ಪುತ್ತೂರು, ಸುಳ್ಯ ತಾಲೂಕುಗಳಲ್ಲಿ ನೂತನ ಸದಸ್ಯರನ್ನೊಳಗೊಂಡ ತಂಡ ರಚನೆಯಾಗಿದೆ.
ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಜಾನಪದ ಪರಿಷತ್ತು ಕೇಂದ್ರ ಸಮಿತಿ ಮುಖ್ಯಸ್ಥರುಗಳು, ಜಿಲ್ಲಾ ಸಮಿತಿ ಮುಖ್ಯಸ್ಥರುಗಳು, ತಾಲೂಕು ಸಮಿತಿ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.



