ಹುಣಸೂರು: ನಾಗರಹೊಳೆ ಅರಣ್ಯದಂಚಿನ ತಾಲ್ಲೂಕಿನ ಚಿಕ್ಕಹೆಜ್ಜೂರು ಗ್ರಾಮದಲ್ಲಿ ಹೊಲಕ್ಕೆ ಅಳವಡಿಸಿದ್ದ ತಂತಿ ಬೇಲಿಗೆ ಸಿಲುಕಿ ಸುಮಾರು 3 ರಿಂದ 4 ವರ್ಷದ ಗಂಡು ಜಿಂಕೆ ಮೃತಪಟ್ಟಿದೆ.

ಹನಗೋಡು ಹೋಬಳಿ ಚಿಕ್ಕಹೆಜ್ಜೂರು ಗ್ರಾಮದಲ್ಲಿರುವ ಬೆಂಗಳೂರು ನಿವಾಸಿ ಅರುಣ್ ಎಂಬುವವರ ತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿಗೆ ಅರಣ್ಯದಿಂದ ಮೇವು ಹುಡುಕಿ ತೋಟಕ್ಕೆ ಲಗ್ಗೆ ಇಟ್ಟ ಜಿಂಕೆ ಕೊಂಬು ಸಿಲುಕು ನಿತ್ರಾಣಗೊಂಡಿದೆ.
ವಿಷಯ ತಿಳಿದ ಸ್ಥಳೀಯರು ಅರಣ್ಯ ಇಲಾಖೆ ಗಮನಕ್ಕೆ ತಂದಾಗ ಸ್ಥಳಕ್ಕೆ ಸಿಬ್ಬಂದಿ ನವೀನ್ ಭೇಟಿ ನೀಡಿ ಪರಿಶೀಲಿಸಿ ಬಳಿಕ ಅಂತ್ಯಸಂಸ್ಕಾರ ನೆರವೇರಿಸಿದರು. ಬೇಸಿಗೆ ಆರಂಭವಾಗುತ್ತಿದ್ದಂತೆ ನಾಗರಹೊಳೆ ಅರಣ್ಯದಿಂದ ನೀರು ಮತ್ತು ಮೇವಿಗಾಗಿ ಜಿಂಕೆ ಸೇರಿದಂತೆ ಕೆಲವು ಪ್ರಾಣಿಗಳು ತೋಟಗಳಿಗೆ ಲಗ್ಗೆ ಹಾಕುತ್ತಿದ್ದು, ಈ ಸಾಲಿನಲ್ಲಿ ಈಗಾಗಲೇ ಮೂರು ಜಿಂಕೆ ವಿವಿಧ ಕಾರಣಗಳಿಂದ ಅರಣ್ಯದಾಚೆ ಮೃತಪಟ್ಟಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.



