ಭಾರತ ಮತ್ತು ಅಮೆರಿಕಾಗಳು ಅನೇಕ ಸಾಮಾನ್ಯ ಅಂಶಗಳನ್ನು ಹೊಂದಿವೆ. ಅಮೆರಿಕಾ ಅವಕಾಶಗಳ ನಗರ. ಇಲ್ಲಿಗೆ ವಲಸೆ ಬಂದು ವಾಸಿಸುತ್ತಿರುವ ಭಾರತೀಯರು ತಮ್ಮ ಮೂಲ ಸಂಸ್ಕೃತಿಯನ್ನು ಬಿಡದೆ ನವ ಪೀಳಿಗೆಗೂ ಅದರ ಅರಿವು ಮೂಡಿಸುತ್ತಿರುವುದು ಅನುಕರಣೀಯ ಕೆಲಸ ಎಂದು ಉದ್ಯಮಿ ಹಾಗು ಮಹಾ ದಾನಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಕುಳೂರು ಹೇಳಿದ್ದಾರೆ.

ಅಮೆರಿಕಾದ ಸೀಟೆಲ್ನಲ್ಲಿ ಉತ್ತರ ಅಮೆರಿಕಾ ಬಂಟರ ಸಂಘ `ಬನ’ ಆಯೋಜಿಸಿದ್ದ 25 ನೇ ಹೆಗ್ಗುರುತು ಮಹಾ ಅಧಿವೇಶನ `ದಿಬ್ಬಣ’ ದಲ್ಲಿ ಪಾಲ್ಗೊಂಡು ಮಾತನಾಡಿದ ಡಾ.ಶೆಟ್ಟಿ, ಅಮೆರಿಕಾ ತನ್ನ ಕನಸಿನ ದೇಶವಾಗಿತ್ತು ಎಂದರು. ಭಾರತ ಮತ್ತು ಅಮೆರಿಕಾ ನಡುವಣ ಸಾಮ್ಯತೆಗಳನ್ನು ಪಟ್ಟಿ ಮಾಡಿದ ಅವರು ಅಮೆರಿಕಾದ್ದು ಚಾರಿತ್ರಿಕ ಪ್ರಜಾಪ್ರಭುತ್ವವಾದರೆ, ಭಾರತವು ಅತಿ ದೊಡ್ಡ ಪ್ರಜಾಪ್ರಭುತ್ವ. ಅಭಿವೃದ್ದಿಗೆ ಸಂಬಂಧಿಸಿ ಅಮೆರಿಕಾ ಅಧ್ಯಕ್ಷರು ಮತ್ತು ಭಾರತದ ಪ್ರಧಾನಿಯವರ ಬಹುತೇಕ ಚಿಂತನೆಗಳಲ್ಲಿ ಹೋಲಿಕೆ ಇದೆ ಎಂದರು. ಅಮೆರಿಕಾದ ಈ ಬಂಟರ ಸಂಘ `ಬನ’ ಆಯೋಜಿಸಿದ ಮಾಹಾಧಿವೇಶನಕ್ಕೆ `ದಿಬ್ಬಣ’ ಎಂಬ ಶೀರ್ಷಿಕೆ ನೀಡಲಾಗಿದೆ. ಬನ ಎಂಬುದಕ್ಕೆ ಆಕಾಶ ಎಂಬ ಅರ್ಥವಿದೆ.

ಈ ಸಂಘಟನೆ ವಿಸ್ತಾರವಾಗಿ ಮತ್ತು ಬಲಿಷ್ಟವಾಗಿ ಬೆಳೆಯಲಿ ಎಂದು ಹಾರೈಸಿದ್ದಾರೆ. `ಬನ’ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದ ಮಹತ್ವವನ್ನು ಪ್ರತಿಬಿಂಬಿಸಿದ ಡಾ. ಶೆಟ್ಟಿ ಹತ್ತು ನಿಮಿಷಗಳಲ್ಲಿ ಮಹಾಕಾವ್ಯ ರಾಮಾಯಣವನ್ನು ಪ್ರಸ್ತುತಪಡಿಸುವ ಕಾರ್ಯವನ್ನು ಮಾಡುವ ಮೂಲಕ ಅಮೆರಿಕಾದಲ್ಲಿ ಜನಿಸಿದ ನವ ಪೀಳಿಗೆಗೆ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಮನದಟ್ಟು ಮಾಡುವ ಯತ್ನವನ್ನು ಮಾಡಿರುವುದು ಭಾರತೀಯರಿಗೆಲ್ಲ ಹೆಮ್ಮೆಯ ಸಂಗತಿ.

ಅಮೆರಿಕಾದ ನೆಲದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಸಂಗತಿಗಳನ್ನು ಹೊಂದಿಸಿಕೊಂಡು ಪ್ರಸ್ತುತಪಡಿಸುವುದು ಸಾಮಾನ್ಯ ಸಂಗತಿಯಲ್ಲ. ಇದಕ್ಕೆ ಅಪಾರ ಸಮಯ, ಸಂಪನ್ಮೂಲ ಹಾಗು ಶ್ರಮ ಬೇಕಾಗುತ್ತದೆ ಎಂದರು. ವಲಸೆ ಎಂಬುದು ಜಾಗತಿಕ ವಿದ್ಯಮಾನ ಎಂಬ ಅಂಶದತ್ತ ಗಮನ ಸೆಳೆದ ಡಾ. ಶೆಟ್ಟಿ, ಬಂಟ ಸಮುದಾಯ ಕೂಡ ಇದರಿಂದ ಮುಕ್ತವಾಗಿಲ್ಲ. ಅವರು ತಾವು ಹೋದಲ್ಲಿ ಸಂಘ ಕಟ್ಟಿಕೊಂಡು ಒಗ್ಗಟ್ಟು ಮೂಡಿಸುತ್ತಿದ್ದಾರೆ. ಇದಕ್ಕೆ ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಮುಂಬೈ ಬಂಟರ ಸಂಘ ಸಹಿತ ಅನೇಕ ಸಂಘಗಳು ಉದಾಹರಣೆಯಾಗಿವೆ ಎಂದು ದೃಢಪಡಿಸಿದ್ರು. ಸಂಘಗಳು ಬಲಿಷ್ಟವಾದರೆ ಏಕತೆ ಬರುತ್ತದೆ, ಸಾಂಸ್ಕೃತಿಕ ಆಚರಣೆಗಳು ನಡೆಯುತ್ತವೆ.

ನವ ಪೀಳಿಗೆಗೆ ಸಂಸ್ಕೃತಿ ಕಲಿಸುವ ಕೆಲಸ ನಡೆಯುತ್ತದೆ ಎಂದವರು ಸಂಘಗಳ ಸಾಮಾಜಿಕ ಹಾಗು ಸಾಂಸ್ಕೃತಿಕ ಜವಾಬ್ದಾರಿಯನ್ನು ವಿಶ್ಲೇಷಿಸಿದರು. ಬನ ಮಹಾಧಿವೇಶನವನ್ನು ಮೈಲಿಗಲ್ಲು ಸಂಭ್ರಮ ಎಂದೂ ಡಾ. ಶೆಟ್ಟಿ ಬಣ್ಣಿಸಿದ್ದಾರೆ. `ಬನ’ದ ಅಧ್ಯಕ್ಷ ಮಂಜುನಾಥ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



