ಉಳ್ಳಾಲ: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯೋರ್ವ ಇನ್ನೊಬ್ಬ ವಿದ್ಯಾರ್ಥಿಗೆ ಚೂರಿ ಇರಿದ ಘಟನೆಯೊಂದು ಉಳ್ಳಾಲದಲ್ಲಿ ವರದಿಯಾಗಿದೆ. ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೊಂಟೆಪದವು ಎಂಬಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಒಂಬತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ನಡುವೆ ಸಣ್ಣಪುಟ್ಟ ಮಾರಾಮಾರಿ ನಡೆದು ಓರ್ವ ವಿದ್ಯಾರ್ಥಿ ಮತ್ತೋರ್ವ ವಿದ್ಯಾರ್ಥಿಯ ಮೇಲೆ ಚಾಕು ಎಸೆದ ಘಟನೆ ಬುಧವಾರ ನಡೆದಿದೆ.
ಮಧ್ಯಾಹ್ನದ ಊಟದ ಸಮದಲ್ಲಿ ವಿದ್ಯಾರ್ಥಿಯ ತಟ್ಟೆಯಿಂದ ಸಾಂಬಾರು ಚೆಲ್ಲಿದ್ದು, ಬಟ್ಟೆಯಲ್ಲಿ ಕಲೆ ಆಯಿತೆಂದು ಕೋಪಗೊಂಡ ವಿದ್ಯಾರ್ಥಿ ಸಾಂಬಾರು ಚೆಲ್ಲಿದ ವಿದ್ಯಾರ್ಥಿಯ ಕೆನ್ನೆಗೆ ಹೊಡೆದಿದ್ದಾನೆ. ಪೆಟ್ಟು ತಿಂದ ವಿದ್ಯಾರ್ಥಿ ಕ್ರೋದದಿಂದ ಬ್ಯಾಗಿನಿಂದ ಚೂರಿ ತೆಗೆದು ವಿದ್ಯಾರ್ಥಿ ಮೇಲೆ ಎಸೆದ ಪರಿಣಾಮ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಅದೃಷ್ಟವಶಾತ್ ಎದೆ ಭಾಗದಿಂದ ಸ್ವಲ್ಪ ಪಕ್ಕದಲ್ಲಿ ಚೂರಿ ತಗುಲಿದ್ದು ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆಯ ಮಾಹಿತಿ ಪಡೆದ ದಕ್ಷಿಣ ಉಪ ವಿಭಾಗ ಎಸಿಪಿ, ಕೊಣಾಜೆ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಸೇರಿದಂತೆ ಅಧಿಕಾರಿಗಳು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಭೇಟಿ ನೀಡಿ ಹುಡುಗನಿಗೆ ಬುದ್ಧಿ ಹೇಳಿ ಮನೆಗೆ ಕಳುಹಿಸಿದ್ದು ಇಂದು ತನಿಖೆ ಮುಂದುವರಿಸಿದ್ದಾರೆ. ಶಾಲೆಗೆ ಹೋಗುತ್ತಿರುವ ಹುಡುಗನಿಗೆ ಚೂರಿ ಎಲ್ಲಿಂದ ಸಿಕ್ಕಿತು ಎಂದು ಪ್ರಶ್ನಿಸಿದ್ದಕ್ಕೆ ಬಸ್ ಸ್ಟಾಂಡ್ ಬಳಿ ಬಿದ್ದು ಸಿಕ್ಕಿದ್ದು ಎಂದು ಹೇಳಿದ್ದಾನೆ.



