ಬಂಟ್ವಾಳ ತಾಲೂಕಿನಲ್ಲಿ ಭಾರೀ ಪ್ರಮಾಣದಲ್ಲಿ ವ್ಯಾಪಕ ಗಾಳಿ ಮಳೆಯಾಗುತ್ತಿದೆ. ತಾಲೂಕಿನ ವಿವಿಧೆಡೆ ಮನೆ ಹಾನಿ ಪ್ರಕರಣಗಳು ಸಂಭವಿಸಿದೆ. ನೇತ್ರಾವತಿ ನದಿಯಲ್ಲಿ ನೀರಿನ ಹರಿವು ತುಸು ಏರಿಕೆ ಕಂಡಿದ್ದು, ಸೋಮವಾರ ನದಿ ನೀರಿನ ಮಟ್ಟ 8.0 ಮೀಟರ್ ಗೆ ಏರಿಕೆಯಾಗಿದೆ. ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುತ್ತಿದ್ದು, ನದಿ ತೀರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮಣಿಹಳ್ಳದಿಂದ ವಾಮದಪದವು ತೆರಳುವ ರಸ್ತೆ ಬದಿಯ ಗುಡ್ಡ ಜರಿದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಇರ್ವತ್ತೂರು ಗ್ರಾಮದ ವಿಶ್ವನಾಥ ಕೋಂ ಜಿನ್ನಪ್ಪ ಪೂಜಾರಿ ರವರ ವಾಸ್ತವ್ಯದ ಮನೆಯ ಬಳಿ ಗುಡ್ಡ ಕುಸಿದಿದ್ದು ಯಾವುದೇ ಜೀವ ಹಾನಿಯಾಗಿಲ್ಲ. ಕರೋಪಾಡಿ ಗ್ರಾಮದ ಒಡಿಯೂರು ಅಂಗನವಾಡಿ ಕೇಂದ್ರದ ಕಾಂಪೌಂಡ್ ಗೆ ಮರ ಬಿದ್ದು ಕಾಂಪೌಂಡ್ ಹಾನಿಯಾಗಿದೆ.



