ದಿಶಾ ಟ್ರಸ್ಟ್ ರಿ. ಕೈಕಂಬ ಮಂಗಳೂರು ಮತ್ತು ಮಂಗಳೂರು ತಾಲೂಕು ತೋಟಗಾರಿಕಾ ಇಲಾಖೆ ಜಂಟಿ ಸಹಭಾಗಿತ್ವದಲ್ಲಿ ಬೆಳೆ ಸಂರಕ್ಷಣೆ ಕುರಿತ ಮಾಹಿತಿ ಕಾರ್ಯಾಗಾರ ಮೂಡಬಿದ್ರೆಯಲ್ಲಿ ನಡೆಯಿತು.

ಕೃಷಿಕರ ನೆಲ ಜಲ ಅಭಿವೃದ್ಧಿ ಸಂಘ ಶಿರ್ತಾಡಿ, ಮಕ್ಕಿ ಕಜೆ ಇವರ ಸಹಕಾರದೊಂದಿಗೆ ಮೂಡಬಿದ್ರೆ ತಾಲೂಕಿನ ಶಿರ್ತಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ದಿಶಾ ಟ್ರಸ್ಟ್ನ ಯೋಜನಾ ನಿರ್ದೇಶಕರಾದ ಡಾ. ಐರಿನ್ ವೇಗಸ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮುಂದಿನ ಮೂರು ವರ್ಷಗಳಲ್ಲಿ ನೈಸರ್ಗಿಕ ಸಂಪನ್ಯೂಲ ಯೋಜನೆಯನ್ನು ಅನುಷ್ಠಾನ ಮಾಡುವಾಗ ಕೃಷಿಕರು ಸಾವಯವ ಕೃಷಿಯನ್ನು ಹೆಚ್ಚಿನ ಭೂಮಿಯಲ್ಲಿ ಮಾಡಿ ಅದರೊಂದಿಗೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ತುರ್ತು ಕ್ರಮಕೈಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ತೋಟಗಾರಿಕಾ ಇಲಾಖೆಯ ಅಧಿಕಾರಿ ಪ್ರವೀಣ್ ಕೆ. ಅವರು ಮಾತನಾಡಿ ಕೃಷಿಕರು ಬೆಳೆ ಸಂರಕ್ಷಣೆ ಮಾಡುವ ವಿಧಾನ, ಅದರಲ್ಲಿ ಒಳಗೊಳ್ಳುವ ಕ್ರಮಗಳು, ಅಡಿಕೆ ಬೆಳೆಯುವ ವಿಧಾನ, ನೀರಾವರಿ, ರಸಗೊಬ್ಬರಗಳ ಸಮರ್ಪಕ ಬಳಕೆ, ರೋಗಭಾದೆ ಮತ್ತು ನಿಯಂತ್ರಣಗಳ ಬಗ್ಗೆ ಮಾಹಿತಿ ನೀಡಿದರು. ಅಡಿಕೆಯೊಂದಿಗೆ ಮಿಶ್ರಕೃಷಿ ಹಾಗೂ ರೈತರಿಗೆ ಇಲಾಖೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ಕೃಷಿಕರಿಗೆ ನೀಡಿದರು.

ಕಾರ್ಯಕ್ರಮದಲ್ಲಿ ಯೋಜನಾ ಸಂಯೋಜಕರಾದ ನಿಹಾಲ್ ಮಚಾದೋ, ಕ್ಷೇತ್ರ ಸಂಯೋಜಕಿಯರಾದ ಮೋಹಿನಿ, ರೂಪಕಲಾ, ಕಾರ್ಯಕ್ರಮ ಸಹಾಯಕರಾದ ದೀಕ್ಷಿತ್ ಉಪಸ್ಥಿತರಿದ್ದರು.



