ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ಯಾನ ಸದಾಶಿವ ಶೆಟ್ಟಿಯವರು ನೋವಿನಿಂದ ಮಾತನಾಡಿರುವ ವಿಡಿಯೋ ಹಿನ್ನೆಲೆ ವಿಟ್ಲ ವಲಯ ಬಂಟರ ಸಂಘದಿಂದ ಅವರಿಗೆ ಬೆಂಬಲ ವ್ಯಕ್ತಪಡಿಸಲಾಗಿದೆ.

ಸದಾಶಿವ ಶೆಟ್ಟಿ ಅವರು ಅಶಕ್ತರು, ಬಡವರು, ವಿದ್ಯಾರ್ಥಿಗಳು ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ನೀಡಿರುವ ಸೇವೆ ಅಪಾರವಾಗಿದೆ. ಅವರ ಮನಸ್ಸಿಗೆ ನೋವುಂಟು ಮಾಡಿದವರನ್ನು ಸಮಾಜ ಖಂಡಿಸುತ್ತಿದ್ದು, ಅವರು ತೆಗೆದುಕೊಂಡ ಕಠಿಣ ನಿರ್ಧಾರದಿಂದ ಹಿಂದೆ ಸರಿದು ಹಿಂದಿನಂತೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಂಘದ ಅಧ್ಯಕ್ಷ ರಾಜೀವ್ ಭಂಡಾರಿ ಕುಂಡಕೋಳಿ ಅವರು ವಿಟ್ಲ ವಲಯ ಬಂಟರ ಸಂಘದ ಪರವಾಗಿ ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಮನವಿ ಮಾಡಿದ್ದಾರೆ. ಕೊಡುಗೈದಾನಿ, ಅಶಕ್ತರ ಬಾಳಿನ ಆಶಾಕಿರಣ ಅದೆಷ್ಟೋ ನೊಂದವರ ಕಣ್ಣೀರು ಒರೆಸಿದ ಸದಾಶಿವಣ್ಣನವರು ಬಹಳಷ್ಟು ನೊಂದು ಆಡಿದ ಮಾತುಗಳನ್ನು ಕೇಳಿ ನನಗೆ ಮಾತ್ರವಲ್ಲ ಜಾತ್ಯಾತೀತವಾಗಿ ಇಡೀ ಸಮಾಜಕ್ಕೆ ಖೇದ ವಾಗಿದೆ. ದಾನದ ಮೂಲಕ ನಮ್ಮ ಜಿಲ್ಲೆ ಮಾತ್ರವಲ್ಲ, ಇಡೀ ರಾಜ್ಯವೇ ತಿರುಗಿ ನೋಡುವಂತಹ ಉದಾತ್ತ ಗುಣದವರಾದ ತಮ್ಮ ಹಾಲಿನಂತಹ ಮನಸ್ಸಿಗೆ ಘಾಸಿ ಆಗುವುದನ್ನು ಯಾರು ಸಹಿಸುವುದಿಲ್ಲ. ತಮ್ಮ ಮನಸ್ಸಿಗೆ ನೋವು ಉಂಟು ಮಾಡಿದವರು ಯಾರೇ ಆಗಲಿ ಅದನ್ನು ನಮ್ಮ ವಿಟ್ಲ ಬಂಟರ ಸಮಾಜ ಮಾತ್ರವಲ್ಲ ಸಮಾಜದ ಪ್ರತಿಯೊಬ್ಬರು ಖಂಡಿಸುತ್ತಾರೆ.

ಸದಾಶಿವಣ್ಣ, ತಾವು ನೊಂದು ತೆಗೆದುಕೊಂಡ ನಿರ್ಧಾರದಿಂದ ಇಡೀ ಅಶಕ್ತ ಸಮಾಜ ಬಡವಾಗುತ್ತದೆ. ಅದು ಏನೇ ಇರಲಿ ಸದಾಶಿವಣ್ಣನ ಜೊತೆ ನಾವು ವಿಟ್ಲ ವಲಯದ ಬಂಟರಿದ್ದೇವೆ, ತಾವು ನಮ್ಮ ಸಮಾಜಕ್ಕೆ ಒಂದು ದಿವ್ಯ ಶಕ್ತಿಯಾಗಿದ್ದೀರಿ, ಆ ಶಕ್ತಿ ಕುಂದುವುದನ್ನು ಯಾರು ಸಹಿಸುವುದಿಲ್ಲ ಇಡೀ ಸಮಾಜವೇ ತಮ್ಮೊಂದಿಗಿರುವಾಗ ತಾವು ನೊಂದುಕೊಳ್ಳುವ ಅವಶ್ಯಕತೆ ಇರುವುದಿಲ್ಲ, ಯಾರೋ ಬೆರಳೆಣಿಕೆಯ ಪಟ್ಟಭದ್ರ ಹಿತಾ ಶಕ್ತಿಯ ಮಾತುಗಳಿಗೆ ಅಥವಾ ಕುಕೃತ್ಯಕ್ಕೆ ತಾವು ಧೃತಿಕೆಡಬೇಕಾಗಿಲ್ಲ, ತಾವು ತಮ್ಮ ಜನಹಿತ ಕಾರ್ಯದಿಂದ ಹಿಂದೆ ಸರಿದರೆ ಎಲ್ಲಾ ವರ್ಗದ ಸಮಾಜ ಬಹಳ ಬೆಲೆ ತೆರಬೇಕಾಗಿದೆ, ತಾವು ಇಷ್ಟು ಸಮಯ ಮಾಡಿದ ಸಮಾಜ ಹಿತ ಕಾರ್ಯವನ್ನು ನಮ್ಮ ಜನ ಯಾವತ್ತು ಮರೆಯಲು ಸಾಧ್ಯವಿಲ್ಲ. ತಾವು ಮಾಡಿಕೊಂಡು ಬಂದ ಸೇವಾ ಕಾರ್ಯದಿಂದ ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ಮೊಟಕುಗೊಳಿಸುವ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ, ಅದೆಷ್ಟೋ ದೇವಸ್ಥಾನಗಳು ಜೀಣೋದ್ಧಾರವನ್ನು ಕಂಡಿವೆ. ಅದೆಷ್ಟೋ ರೋಗಿಗಳು ಸಾವಿನ ದವಡೆಯಿಂದ ಪಾರಾಗಿ ಜೀವನವನ್ನು ಮುಂದುವರಿಸಿದ್ದಾರೆ, ಅದೆಷ್ಟೋ ವಸತಿಹೀನರು ವಸತಿ ನಿರ್ಮಿಸಿಕೊಂಡು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ, ಇಂತಹ ಒಬ್ಬ ದೇವಸಮಾನ ಮಹಾನ್ ವ್ಯಕ್ತಿಯನ್ನು ನಮ್ಮ ಸಮಾಜ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಆದ್ದರಿಂದ ಸದಾಶಿವಶೆಟ್ಟರಲ್ಲಿ ನಮ್ಮೆಲ್ಲರ ಬೇಡಿಕೆ ತಾವು ತೆಗೆದುಕೊಂಡ ಕಠಿಣ ನಿರ್ಧಾರದಿಂದ ಹಿಂದೆ ಸರಿದು ಈ ಮೊದಲಿನಂತೆಯೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಆಧಾರವಾಗಬೇಕಾಗಿ ನಮ್ಮೆಲ್ಲರ ಕೋರಿಕೆ ಆಗಿದೆ. ಸದಾಶಿವಣ್ಣ ಈ ರೀತಿಯ ಅಪಪ್ರಚಾರಗಳು ಸಮಾಜಮುಖಿಯಾಗಿ ಕೆಲಸ ಮಾಡುವವರಿಗೆ ಸರ್ವೇ ಸಾಮಾನ್ಯವಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬಂಟರ ಸಂಘ ವಿಟ್ಲ ವಲಯದ ಗೌರವ ಅಧ್ಯಕ್ಷರಾದ ರಾಧಾಕೃಷ್ಣ ಚೆಲ್ಲಡ್ಕ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಶೆಟ್ಟಿ ಮರುವಾಳ, ಗೌರವ ಸಲಹೆಗಾರರಾದ ಪ್ರಭಾಕರ್ ಶೆಟ್ಟಿ ದಂಬೆಕಾನ, ತಾಂತ್ರಿಕ ಸಲಹೆಗಾರರಾದ ಭಾಸ್ಕರ ರೈ ಮೂಡ0ಬೈಲು ಪ್ರೆಸ್ ಮೀಟ್ ನಲ್ಲಿ ಉಪಸ್ಥಿತರಿದ್ದರು.



