ತೆಂಕುತ್ತಿಟ್ಟು ಯಕ್ಷಗಾನ ಶೈಲಿಯ ಅಪ್ರತಿಮ ಕಲಾತಪಸ್ವಿ, ದಶಕಗಳ ಕಾಲ ರಂಗಸ್ಥಳವನ್ನು ಆಳಿದ ಹಿರಿಯ ವಿದ್ವಾಂಸ ಶ್ರೀ ಸೂರಿಕುಮೇರು ಕೆ. ಗೋವಿಂದ ಭಟ್ ಅವರು ಇಂದು ನಿಧನ ಹೊಂದಿದ್ದಾರೆ.

ಹೌದು..ಏಳು ದಶಕಗಳ ಕಾಲ ರಂಗಸ್ಥಳವನ್ನೇ ಉಸಿರಾಗಿಸಿಕೊಂಡಿದ್ದ, ತೆಂಕುತಿಟ್ಟಿನ ಅದ್ವಿತೀಯ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ (85) ಅವರು ಗೆಜ್ಜೆ ಕಳಚಿ ಕಣ್ಮರೆಯಾಗಿದ್ದಾರೆ. ಯಕ್ಷಗಾನದ ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು ಸಿದ್ದಹಸ್ತರು. ಇವರು 1940, ಮಾರ್ಚ್ 22ರಂದು ಬಂಟ್ವಾಳದ ಕೋಡಪದವಿನ ಕಡು ಬಡತನದ ಕುಟುಂಬದಲ್ಲಿ ಜನಿಸಿದ ಗೋವಿಂದರ ಬಾಲ್ಯ ಕಣ್ಣೀರಿನ ಕತೆಯಾಗಿತ್ತು. ತಂದೆಯ ಅನಾರೋಗ್ಯ, ಆಸ್ತಿಗಾಗಿ ನಡೆದ ಸಂಘರ್ಷ, ಹೋಟೆಲ್ನಲ್ಲಿ ಎಂಜಲು ತಟ್ಟೆ ತೊಳೆದ ನೋವು ಹೀಗೆ ಹಸಿವಿನ ಕಿಚ್ಚಿನಲ್ಲೇ ಬೆಂದ ಜೀವವದು. ನಂತರ 1951ರಲ್ಲಿ ಬಾಲಗೋಪಾಲ ವೇಷದ ಮೂಲಕ ಧರ್ಮಸ್ಥಳ ಮೇಳದಲ್ಲಿ ಆರಂಭವಾದ ಅವರ ಕಲಾ ಪಯಣ, ಯಕ್ಷಗಾನದ ಇತಿಹಾಸದಲ್ಲೇ ಒಂದು ದಾಖಲೆಯಾಗಿ ಉಳಿಯುವಂಥದ್ದು.



