ಹಣ ಮತ್ತು ಚಿನ್ನಾಭರಣಕ್ಕಾಗಿ ತನ್ನದೇ ಚಿಕ್ಕಮ್ಮನನ್ನು ಕೊಲೆ ಮಾಡಿ, ಶವ ಸುಟ್ಟು ಹಾಕಿದ್ದ ಭೀಕರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದ್ದು, ಒಂದು ವರ್ಷದ ನಂತರ ಘಟನೆ ಬೆಳಕಿಗೆ ಬಂದಿದೆ.

ಮೃತ ನುಣಕಮ್ಮ ಎಂಬುವವರ ಅಣ್ಣನ ಮಗಳು ನಾಗಲಕ್ಷ್ಮಿ ಮತ್ತು ಆಕೆಯ ಪ್ರಿಯಕರ, ಆಂಧ್ರಪ್ರದೇಶದ ಮಡಕಸಿರ ನಿವಾಸಿ ಅಶೋಕ್ ಕುಮಾರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ನುಣಕಮ್ಮ ಅವರಿಗೆ ಗಂಡ ಮತ್ತು ಮಕ್ಕಳಿರಲಿಲ್ಲ, ಅವರು ತಮ್ಮ ಅಣ್ಣನ ಮನೆಯಲ್ಲಿ ವಾಸವಿದ್ದರು. ಸೆಪ್ಟೆಂಬರ್ 20 ನುಣಕಮ್ಮ ಅವರಿಗೆ ಪಿಡ್ಸ್ ಬರುತ್ತಿದೆ, ಚಿಕಿತ್ಸೆ ಕೊಡಿಸುತ್ತೇವೆ ಎಂದು ನಂಬಿಸಿದ ಆರೋಪಿಗಳು ಅವರನ್ನು ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ನುಣಕಮ್ಮಳ ಬಳಿ ಇದ್ದ ಮನೆಯ ಬೀರು ಬೀಗ ತೆಗೆದುಕೊಂಡು, ಆಕೆಯ ಮನೆಯಲ್ಲಿದ್ದ ಹಣ, ಚಿನ್ನಾಭರಣ ಕಳ್ಳತನ ಮಾಡಿ ನೆಮ್ಮದಿಯಾಗಿದ್ದರು. ಕೊಲೆ ಮಾಡಿದ ನಾಲ್ಕು ದಿನಗಳ ನಂತರ ಮತ್ತೆ ವಾಪಸ್ ಬಂದು ಶವವನ್ನು ಪೆಟ್ರೋಲ್ ಹಾಕಿ ಸುಟ್ಟು ಗುರುತು ಸಿಗದಂತೆ ಮಾಡಿದ್ದರು. ನಂತರ ಏನು ಗೊತ್ತಿಲ್ಲದಂತೆ ವರ್ತಿಸುತ್ತಿದ್ದರು. ಆದರೆ ಪೊಲೀಸರು ವರ್ಷದ ನಂತರ ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಅರಣ್ಯದಲ್ಲಿ ಪತ್ತೆಯಾಗಿದ್ದ ಬುರುಡೆ ಮತ್ತು ಮೂಳೆಗಳ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು, ಸುಮಾರು ಒಂದು ವರ್ಷದ ನಂತರ ಮೃತ ಮಹಿಳೆಯ ಗುರುತು ಪತ್ತೆಹಚ್ಚಿ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.



