ಮೊಬೈಲ್ ನೋಡುವ ವಿಚಾರವಾಗಿ ತಾಯಿ ಬೈದು ಬುದ್ಧಿಮಾತು ಹೇಳಿದ್ದಕ್ಕೆ 16 ವರ್ಷದ ಅಪ್ರಾಪ್ತ ಬಾಲಕನೊಬ್ಬ ಮನೆಯಿಂದ ಹೊರಹೋಗಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಸುಳ್ಯದ ಕಸಬಾ ಗ್ರಾಮದಲ್ಲಿ ನಡೆದಿದೆ.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿಯಾಗಿದ್ದು, ಪ್ರಸ್ತುತ ಸುಳ್ಯದ ಬೋರುಗುಡ್ಡೆಯಲ್ಲಿ ಪೋಷಕರೊಂದಿಗೆ ವಾಸವಿದ್ದ ಸೈಯದ್ ಆಲಿ ಸೈಯದ್ (16) ನಾಪತ್ತೆಯಾದ ಬಾಲಕ. ಮೇ 30ರಂದು ಬೆಳಗ್ಗೆ ಸೈಯದ್ ಗೆ ಮೊಬೈಲ್ ನೋಡುತ್ತಿರುವ ವಿಚಾರದಲ್ಲಿ ತಾಯಿ ಬೈದು ಮೊಬೈಲ್ ಹವ್ಯಾಸ ಬಿಡುವಂತೆ ಬುದ್ಧಿಮಾತು ಹೇಳಿದ್ದರು. ಇದರಿಂದ ಮನಸ್ತಾಪ ಮಾಡಿಕೊಂಡ ಬಾಲಕ, ಸ್ವಲ್ಪ ಸಮಯದ ಬಳಿಕ ಯಾರಿಗೂ ಹೇಳದೆ ಮನೆಯಿಂದ ಹೊರಹೋಗಿದ್ದಾನೆ. ಸೈಯದ್ ಎಷ್ಟು ಹೊತ್ತಾದರೂ, ಮನೆಗೆ ಹಿಂತಿರುಗದ ಹಿನ್ನೆಲೆ ಆತನ ಕುಟುಂಬಸ್ಥರು ಆತನ ಗೆಳೆಯರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿ ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಬಳಿಕ ದೂರು ದಾಖಲಿಸಿಕೊಂಡ ಸುಳ್ಯ ಪೊಲೀಸ್ ಠಾಣೆಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



