ಈ ಸಾಲಿನಲ್ಲಿ ಮತ್ಸ್ಯಕ್ಷಾಮ ಉಂಟಾಗದೆ, ಸಮುದ್ರದಲ್ಲಿ ಮೀನುಗಳ ಸಮೃದ್ಧಿ ಇರಲಿ ಹಾಗೂ ಮೀನುಗಾರಿಕೆಗೆ ತೆರಳುವ ವೇಳೆ ಯಾವುದೇ ಅನಾಹುತ ಸಂಭವಿಸದಿರಲಿ ಎಂದು ಪ್ರಾರ್ಥಿಸಿ ಗಂಗೊಳ್ಳಿಯಲ್ಲಿ ಮೀನುಗಾರರು ಸಂಪ್ರದಾಯಬದ್ಧವಾಗಿ ಸಮುದ್ರ ಪೂಜೆ ನೆರವೇರಿಸಿದರು.

ಅರ್ಚಕ ವೇದಮೂರ್ತಿ ವಿಠಲ್ದಾಸ್ ಭಟ್ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಪರ್ಸಿನ್ ಬೋಟ್, 320 ಬೋಟ್ ಹಾಗೂ ಟ್ರಾಲರ್ ಬೋಟ್ಗಳ ಸಂಘದ ಸದಸ್ಯರು ಪಾಲ್ಗೊಂಡು ಸಮುದ್ರ ರಾಜನಿಗೆ ಹಾಲು, ತೆಂಗಿನಕಾಯಿ, ಫಲ-ಪುಷ್ಪಗಳನ್ನು ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಎರಡು ತಿಂಗಳ ಮೀನುಗಾರಿಕಾ ನಿಷೇಧ ಜುಲೈ 31ಕ್ಕೆ ಅಂತ್ಯಗೊಂಡಿದ್ದರೂ, ಸಮುದ್ರದಲ್ಲಿ ಅಲೆಗಳ ಅಬ್ಬರ ಮತ್ತು ಪ್ರಕ್ಷುಬ್ಧ ವಾತಾವರಣ ಮುಂದುವರಿದಿರುವುದರಿಂದ ಮೀನುಗಾರರು ಇನ್ನೂ ಕಡಲಿಗಿಳಿಯಲು ಸಾಧ್ಯವಾಗಿಲ್ಲ. ಪ್ರಸ್ತುತ ಗಂಗೊಳ್ಳಿ ಬಂದರಿನಲ್ಲಿ ದಡದಲ್ಲಿರುವ ಬೋಟ್ಗಳನ್ನು ನೀರಿಗೆ ಇಳಿಸಲು ಸಿದ್ಧತೆ, ಬಲೆ ಹೆಣೆಯುವುದು, ಮೀನುಗಾರಿಕಾ ಪರಿಕರಗಳ ಜೋಡಣೆ ಹಾಗೂ ಬೋಟ್ಗಳಿಗೆ ಬಣ್ಣ ಬಳಿಯುವ ಕೆಲಸ ಭರದಿಂದ ಸಾಗುತ್ತಿದೆ. ಸಮುದ್ರದ ವಾತಾವರಣ ಅನುಕೂಲಕರವಾದರೆ ಆಗಸ್ಟ್ 16ರ ಬಳಿಕ ಗಂಗೊಳ್ಳಿಯ ಮೀನುಗಾರರು ಮೀನುಗಾರಿಕೆಗೆ ತೆರಳುವ ನಿರೀಕ್ಷೆಯಿದೆ ಎಂದು ಪರ್ಸಿನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಡಿವಾಳ ತಿಳಿಸಿದ್ದಾರೆ.



