ತಡರಾತ್ರಿ ದೇವಸ್ಥಾನವೊಂದರಲ್ಲಿ ಕಳ್ಳತನ ಮಾಡಿ, ಮತ್ತೊಂದು ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ಖದೀಮರು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಘಟನೆ ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಹೆಬ್ಬಾಳ ಗ್ರಾಮದ ಶ್ರೀ ಓಂಕಾರೇಶ್ವರ ದೇವಸ್ಥಾನದ ಬೀಗ ಒಡೆದು ವಿಗ್ರಹ, ದೀಪದ ಕಂಬಗಳು, ಗಂಟೆಗಳು, ಹುಂಡಿ ಹಾಗೂ ಬೆಲೆಬಾಳುವ ಪೂಜಾ ಸಾಮಗ್ರಿಗಳನ್ನು ಕಳ್ಳತನ ಮಾಡಲಾಗಿದೆ.
ಬಳಿಕ ನೇರಳಕುಪ್ಪೆ ಗ್ರಾಮದ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಕಳ್ಳತನ ಮಾಡಲು ಆರೋಪಿಗಳು ಕಾರಿನಲ್ಲಿ ಎರಡು-ಮೂರು ಬಾರಿ ಸುತ್ತಾಡುತ್ತಿದ್ದರು. ಅನುಮಾನಗೊಂಡ ಗ್ರಾಮಸ್ಥರೊಬ್ಬರು ಸ್ನೇಹಿತರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ತೆರಳಿ ನೋಡಿದಾಗ ಆರೋಪಿಗಳು ದೇವಸ್ಥಾನದ ಬೀಗ ಒಡೆಯುತ್ತಿರುವುದು ಕಂಡುಬಂದಿದೆ.

ಗ್ರಾಮಸ್ಥರನ್ನು ಕಂಡು ಆರೋಪಿಗಳು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದಾಗ, ಟ್ರ್ಯಾಕ್ಟರ್ ಅಡ್ಡಗಟ್ಟಿ ಕಾರನ್ನು ತಡೆದು ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳ್ಳತನದಲ್ಲಿ ಒಟ್ಟು ನಾಲ್ವರು ಭಾಗಿಯಾಗಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ಇಬ್ಬರು ಮೈಸೂರಿನವರು ಎನ್ನಲಾಗಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.



