ಹಿಂದಿನ ಸರಕಾರದ ವೇಳೆ ಉಳ್ಳಾಲದ ಬಟ್ಟಪಾಡಿಯಲ್ಲಿ ತೀವ್ರ ಕಡಲ್ಕೊರೆತದಿಂದ ತೀರ ಕೊಚ್ಚಿ ಹೋಗಿದ್ದು ಕಾಸರಗೋಡಿನ ನೆಲ್ಲಿಕುನ್ನು ಮಾದರಿಯ ಸೀವೇವ್ ಬ್ರೇಕರ್ ನಿರ್ಮಾಣ ಮಾಡುವುದಾಗಿ ಹೇಳಿ ಕೊನೆಯಲ್ಲಿ ಸಾಕಷ್ಟು ಅಧ್ಯಯನ ಬಳಿಕ ಅದನ್ನು ಬಹುತೇಕ ಕೈಬಿಡಲಾಗಿದೆ.

ಸದ್ಯ ಶಾಶ್ವತ ಪರಿಹಾರ ಅಸಾಧ್ಯ, ತುರ್ತಾಗಿ ಕಡಲಿಗೆ ಕಲ್ಲು ಹಾಕುವ ಮೂಲಕ ಪರಿಹಾರ ಕಂಡುಕೊಳ್ಳುವಂತೆ ಸ್ಥಳೀಯ ಶಾಸಕರು, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ಆ ಬಳಿಕ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಸೂಚಿಸಿದ್ದರು.
ಅದರಂತೆ ಬಂದರು ಇಲಾಖೆ ಯವರೂ ಕೆಲವು ಗುತ್ತಿಗೆದಾರರನ್ನು ವ್ಯವಸ್ಥೆ ಮಾಡಿದ್ದರು. ಒಟ್ಟು 1.6 ಕೋಟಿ ರೂ. ಅಂದಾಜು ಮೊತ್ತಕ್ಕೆ ಉಳ್ಳಾಲದ ಸೀಗ್ರೌಂಡ್ಸ್ ಹಾಗೂ ಬಟ್ಟಪಾಡಿಯಲ್ಲಿ ಕಡಲ ತೀರಕ್ಕೆ ಕಲ್ಲು ಹಾಕುವ ಕೆಲಸವನ್ನು ಗುತ್ತಿಗೆದಾರರಿಗೆ ನೀಡಲಾಗಿತ್ತು. ಅದರಲ್ಲಿ ಸುಮಾರು ಶೇ. 50ರಷ್ಟು ಕೆಲಸವಾದರೂ ಇಲಾಖೆಯಿಂದ ಹಣ ಬರುವ ಸಾಧ್ಯತೆ ಕಾಣದಾದಾಗ ಗುತ್ತಿಗೆದಾರರು ಇದು “ಹಿಂದಿನ ಅನುಭವ’ ಎಂದು ಅಲ್ಲಿಗೇ ಕೆಲಸ ಸ್ಥಗಿತಗೊಳಿಸಿ ಹೋಗಿದ್ದಾರೆ.
ಆ ಮೂಲಕ ಕಳೆದ 5 ವರ್ಷಗಳಿಂದ ಆಗುತ್ತಿದ್ದ ಸಂಪ್ರದಾಯ ಈ ವರ್ಷವೂ ಮುಂದುವರಿದಂತಾಗಿದೆ. ಗುತ್ತಿಗೆದಾರರಿಗೆ ಬರಬೇಕಾದ ಮೊತ್ತ 25.14 ಕೋಟಿ ರೂ.ಗೆ ಏರಿಕೆಯಾಗಿದೆ. 2018-19ರಲ್ಲಿ ಸೋಮೇಶ್ವರ ಭಾಗದಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿ ತಕ್ಷಣಕ್ಕೆ ಬೇಕಾದ ಸುಮಾರು 2.3 ಕಿ.ಮೀ ಭಾಗಕ್ಕೆ ಕಲ್ಲು ಹಾಕಲಾಗಿತ್ತು. ಆದರೆ ಇದಕ್ಕೆ ಸರಕಾರದಿಂದ ಅನುಮೋದನೆ ಸಿಗದೆ ಈ ಮೊತ್ತ ಹಾಗೆಯೇ ಬಾಕಿಯಾಗಿತ್ತು. ಅದಕ್ಕೆ ಅನಂತರದ ವರ್ಷಗಳಲ್ಲಿ ಮೊತ್ತ ಸೇರ್ಪಡೆಯಾಗುತ್ತಲೇ ಹೋಗಿದೆ.



