ಕಾರ್ಕಳ: 5 ದಿನಗಳ ಹಿಂದೆ ಕಾಣೆಯಾಗಿದ್ದ ಯುವಕನೋರ್ವನ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಹೊಳೆಯಲ್ಲಿ ಪತ್ತೆಯಾಗಿದೆ. ದುರ್ಗ ಗ್ರಾಮದ ಸಂದೇಶ್ ಶೆಟ್ಟಿ ಎಂಬವರು ನಾಪತ್ತೆಯಾಗಿದ್ದ ಯುವಕ. ಇವರ ಪತ್ತೆಗೆ ಮನೆಯವರು ಹಾಗೂ ಸ್ಥಳೀಯರು ಸಾಕಷ್ಟು ಹುಡುಕಾಟ ನಡೆಸಿದರೂ ಸಂದೇಶ್ ಶೆಟ್ಟಿ ಪತ್ತೆಯಾಗಿರಲಿಲ್ಲ. ಸಂದೇಶ್ ಶೆಟ್ಟಿ ಅವರ ಶವವು ಬುಧವಾರ ಬೆಳಗ್ಗೆ ಕಾವೇರಡ್ಕ ಬಳಿಯ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸಂದೇಶ್ ಶೆಟ್ಟಿ ನಾಪತ್ತೆ ದಿನವೇ ದುರ್ಗ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿದ್ದು ಭಾರೀ ಮಳೆಯ ಹಿನ್ನೆಲೆಯಲ್ಲಿ ಅವರ ಶವ ತೇಲಿಕೊಂಡು ಬಂದು ಕಾವೇರಡ್ಕ ಎಂಬಲ್ಲಿನ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿಕೊಂಡಿದೆ. ಸ್ಥಳೀಯರು ಕಾರ್ಕಳ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.



