ಆಕಾಶದಲ್ಲಿ ಜನರೇ ಇಲ್ಲದೆ ಹಾರಿ ಬಂದ ಪ್ಯಾರಾಚ್ಯೂಟ್ ಒಂದು ಗ್ರಾಮದ ಹೊಲವೊಂದರಲ್ಲಿ ಲ್ಯಾಂಡ್ ಆದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಭೀಮಾತೀರದ ಮರಗೂರು ಗ್ರಾಮದಲ್ಲಿ ನಡೆದಿದೆ.

ಸ್ಥಳಕ್ಕೆ ಓಡಿ ಬಂದು ಪರಿಶೀಲಿಸಿದ ಗ್ರಾಮಸ್ಥರು ಬಿದ್ದಿರುವ ಪ್ಯಾರಾಚ್ಯೂಟ್ನಲ್ಲಿದ್ದ ವಸ್ತುವನ್ನು ನೋಡಿ ಭಯಗೊಂಡಿದ್ದಾರೆ. ಬಾಕ್ಸ್ ಒಂದರಲ್ಲಿ ಜೋಡಿಸಲಾದ ಎಲೆಕ್ಟ್ರಾನಿಕ್ ಉಪಕರಣ ನೆಲಕ್ಕೆ ಬಿದ್ದು ಪುಡಿಯಾಗಿದ್ದರೂ ಅದರಲ್ಲಿ ಸಿಗ್ನಲ್ ಆಗುತ್ತಿತ್ತು. ಹೀಗಾಗಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಕೂಲಂಕುಶವಾಗಿ ನಡೆಸಿದ ಪರಿಶೀಲನೆ ಬಳಿಕ ಇದು ಹೈದರಾಬಾದ್ ಮೂಲದ ಟಾಟ ಇನ್ಸ್ಟಿಟ್ಯೂಟ್ ಆಫ್ ಫಂಡಮೆAಟಲ್ ರಿಸರ್ಚ್ ಸೆಂಟರ್ ಹಾರಿಸಿದ್ದ ಉಪಕರಣ ಅನ್ನೋದು ಗೊತ್ತಾಗಿದೆ. ಹವಾಮಾನ ಹಾಗೂ ವಾತಾವರಣದ ಅಧ್ಯಯನಕ್ಕಾಗಿ ಇದನ್ನು ಉಡಾವಣೆ ಮಾಡಲಾಗಿದ್ದು, ನಿಯಂತ್ರಣ ಕಳೆದುಕೊಂಡು ಭೀಮಾತೀರದ ಮರಗೂರಿನ ಹೊಲಕ್ಕೆ ಬಿದ್ದಿತ್ತು. ಈ ಬಗ್ಗೆ ವಿಯಯಪುರ ಜಿಲ್ಲಾಡಳಿತ ಸಂಶೋಧನಾ ಸಂಸ್ಥೆಗೆ ಮಾಹಿತಿ ನೀಡಿದ್ದು, ಅಲ್ಲಿನ ವಿಜ್ಞಾನಿಗಳು ಈ ಉಪಕರಣ ತೆಗೆದುಕೊಂಡು ಹೋಗಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.



