ಮಂಡಿಯೂರಿ ಕದನ ವಿರಾಮಕ್ಕೆ ಬಂದ ಪಾಕಿಸ್ತಾನಿಯರಿಗೆ ಯಾವಾಗ ಬುದ್ಧಿ ಬರುತ್ತೋ ಗೊತ್ತಿಲ್ಲ. ಜಂಟಿ ಕೆಳಗೆ ಬಿದ್ದರೂ, ಮೀಸೆ ಮಣ್ಣಾಗಲಿಲ್ಲ ಅನ್ನೋ ಹಾಗೆ ಇವರ ಭಂಡತನಕ್ಕೆನೂ ಕಮ್ಮಿ ಇಲ್ಲ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ಈ ವರ್ತನೆಯೇ ಇದಕ್ಕೆ ತಾಜಾ ಉದಾಹರಣೆಯಾಗಿದೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಪತರಗುಟ್ಟಿದ ಪಾಕಿಸ್ತಾನದಲ್ಲಿ ವಿಜಯೋತ್ಸವ ಆಚರಿಸುತ್ತಾರೆ ಅಂದ್ರೆ ಭಾರತೀಯರು ಅದ್ಯಾವ ದಿಕ್ಕಿಗೆ ತಿರುಗಿ ನಗಬೇಕೋ ನೀವೇ ಹೇಳಿ. ಶಾಹಿದ್ ಅಫ್ರಿದಿ ಅವರು ಇಂತಹ ಪುಂಡಾಟಕ್ಕೆ ಮುಂದಾಗಿದ್ದು, ಯುದ್ಧ ಗೆದ್ದಿದ್ದೇವೆ ಎಂದು ವಿಜಯೋತ್ಸವದ ಮೆರವಣಿಗೆ ಮಾಡಿದ್ದಾರೆ.ಕರಾಚಿಯಲ್ಲಿ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರು ಱಲಿ ಮಾಡಿದ್ದಾರೆ. ಅಫ್ರಿದಿ ಜೊತೆಗಿದ್ದವರು ಈ ವಿಡಿಯೋ ರೆಕಾರ್ಡ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ.ಇತ್ತೀಚೆಗೆ ಮಾತನಾಡಿದ್ದ ಶಾಹಿದ್ ಅಫ್ರಿದಿ ಅವರು ನಾವೇ ಭಾರತದ ಮೇಲಿನ ಯುದ್ಧವನ್ನು ಗೆದ್ದಿದ್ದೇವೆ. ಪಾಕಿಸ್ತಾನ ಕದನ ವಿರಾಮಕ್ಕೆ ಮನವಿ ಮಾಡಿಕೊಳ್ಳಲಿಲ್ಲ ಎಂದಿದ್ದರು. ಅಲ್ಲದೇ ಪಹಲ್ಗಾಮ್ ದಾಳಿಗೆ ಭಾರತವೇ ಕಾರಣ ಎಂದು ಗೂಬೆ ಕೂರಿಸಿದ್ದಾರೆ.
ಭಾರತ ಮಾಡಿದ ತಪ್ಪುಗಳಿಂದಲೇ ಪಹಲ್ಗಾಮ್ನಲ್ಲಿ ಗುಂಡಿನ ದಾಳಿ ನಡೆದಿದೆ. ಆದರೆ ಭಾರತ ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತದೆ. ಭಾರತವೇ ಭಾರತೀಯರನ್ನು ಕೊಲ್ಲುವಂತೆ ಮಾಡಿಕೊಂಡಿದೆ.
ಇಸ್ಲಾಂ ಧರ್ಮ ನಮಗೆ ಶಾಂತಿಯನ್ನು ಮಾತ್ರ ಬೋಧಿಸುತ್ತದೆ. ಪಾಕಿಸ್ತಾನ ಎಂದಿಗೂ ಇಂತಹ ಭಯೋತ್ಪಾದನಾ ದಾಳಿಗೆ ಬೆಂಬಲ ನೀಡುವುದಿಲ್ಲ. ಭಾರತೀಯರು ತಮ್ಮನ್ನು ತಾವೇ ದೂಷಿಸಿಕೊಳ್ಳಬೇಕು. ನಾವು ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದಲು ಸದಾ ಪ್ರಯತ್ನ ಪಡುತ್ತೇವೆ ಎಂದು ಶಾಹಿದ್ ಅಫ್ರೀದಿ ಹೇಳಿದ್ದಾರೆ.



