ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಹೋಗುವ ಫೂಟ್ಪಾತ್ ರಸ್ತೆಯು ಜರಿದು ಗುಂಡಿಯಾಗಿದ್ದು, ಪಾದಚಾರಿಗಳ ಬಲಿಗಾಗಿ ಆಹ್ವಾನಿಸುವಂತಿದೆ.

ದಿನವೂ ಕಿಕ್ಕಿರಿದು ಜನರು ಸಂಚರಿಸುವ ರಸ್ತೆಯು ಮಳೆಯಿಂದ ಹಾನಿಯಾಗಿದೆ. ಮಾತ್ರವಲ್ಲದೆ ಈ ಮೊದಲೇ ಅಲ್ಲಿ ಇದ್ದ ಡ್ರೈನೇಜ್ ಗುಂಡಿಯು ಬಾಯಿ ತೆರೆದಿದ್ದು ಅಪಾಯಕ್ಕೆ ದಾರಿಮಾಡಿಕೊಡುತ್ತಿದೆ. ಕೆಲ ದಿನಗಳ ಹಿಂದೆ ಈ ಗುಂಡಿಯಲ್ಲಿ ರೈಲ್ವೆ ನಿಲ್ದಾಣಕ್ಕೆ ಸಂಚರಿಸುತ್ತಿದ್ದ ವ್ಯಕ್ತಿಯೋರ್ವ ಬಿದ್ದ ಘಟನೆ ಕೂಡ ನಡೆದಿದೆ. ಅಪಾಯ ಕಣ್ಣೆದುರಿಗೇ ಇದ್ರೂ ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಅದಕ್ಕೆ ತೇಪೆ ಹಚ್ಚುವ ಕೆಲಸವೂ ಮಾಡದೇ, ಗುಂಡಿಯ ಬದಿಗೆ ಯಾವುದೇ ಕನಿಷ್ಠ ಅಪಾಯವನ್ನು ತಡೆಯುವ ಸೂಚನಾ ಫಲಕವನ್ನೂ ಇಟ್ಟಿಲ್ಲ. ರಸ್ತೆಯಲ್ಲಿ ವಾಹನ ಸಂಚಾರ ದಟ್ಟವಾಗಿದ್ದು ಆ ಭಾಗವಾಗಿ ನಡೆದು ಹೋಗುವುದು ಸವಾಲಾಗಿದೆ.

ಮುಂಗಾರು ಚುರುಕಾಗಿದ್ದು, ಹಾನಿಯಾದ ರಸ್ತೆಯು ಬಾಯ್ತೆರೆದು ನಿಂತಿದೆ. ಮುಂದಿನ ದಿನಗಳಲ್ಲಿ ಈ ಗುಂಡಿಯಲ್ಲಿ ಬಿದ್ದು ಕೈ, ಕಾಲು ಮುರಿಯುವ ಸಾಧ್ಯತೆಯ ಜೊತೆಗೆ ದೊಡ್ದ ಅಪಾಯದ ಮುನ್ಸೂಚನೆಯಂತೆ ಗೋಚರಿಸುತ್ತಿದೆ. ಅಧಿಕಾರಿಗಳು ಈ ಬಗ್ಗೆ ಕೂಡಲೇ ಗಮನಹರಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.



