ಮೊಬೈಲ್ನಲ್ಲಿ ಮುಳುಗಿದ್ದ ತಾಯಿಯ ಕಣ್ಣು ತಪ್ಪಿಸಿ ತೋಟದೊಳಗೆ ಹೋಗಿದ್ದ ಎರಡು ವರ್ಷದ ಮಗು ರಾತ್ರಿಯಿಡೀ ತೋಟದಲ್ಲಿ ಇದ್ದ ಘಟನೆ ಕೊಡಗಿನಲ್ಲಿ ನಡೆದಿದೆ.

ರಾತ್ರಿಯೆಲ್ಲಾ ತೋಟದಲ್ಲಿದ್ದ ಕಂದಮ್ಮನನ್ನು ಸಾಕು ನಾಯಿ ತೋಟದಲ್ಲಿ ಪತ್ತೆ ಹಚ್ಚಿ ಪಾಲಕರು ನಿರಾಳವಾಗುವಂತೆ ಮಾಡಿದ ಈ ಮನಕಲಕುವ ಘಟನೆ ನಡೆದಿರುವುದು ವೀರಾಜಪೇಟೆ ತಾಲೂಕಿನ ಕೊಂಗಣ ಗ್ರಾಮದಲ್ಲಿ. ನಾಪತ್ತೆಯಾಗಿದ್ದ ಮಗು ಸುನನ್ಯ ಭಾನುವಾರ ಪತ್ತೆಯಾಗಿದೆ.

ಶರಿ ಗಣಪತಿ ಎಂಬವರ ತೋಟದಲ್ಲಿ ಮಗುವಿನ ಪೋಷಕರು ಕೆಲಸ ಮಾಡುತ್ತಿದ್ರು, ಊಟದ ಬಳಿಕ ತಾಯಿ ನಾಗಿಣಿ ಮೊಬೈಲ್ ನೋಡಿಕೊಂಡು ಕುಳಿತಿದ್ದಾರೆ. ಸಂಜೆ ವೇಳೆಗೆ ಮಗು ನಾಪತ್ತೆಯಾಗಿರುವುದು ಅರಿವಿಗೆ ಬಂದಿದೆ. ಸ್ಥಳೀಯರು, ಅರಣ್ಯ ಇಲಾಖೆ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದಾರೆ. ಶೋಧ ಕಾರ್ಯಾಚರಣೆಯಲ್ಲಿ ಸಾಕುನಾಯಿಗಳು ಭಾಗವಹಿದ್ದವು. ಕೊನೆಗೂ ತೋಟದ ನಡುವೆ ಮಗುವನ್ನು ಶ್ವಾನ ಓರಿಯೋ ಪತ್ತೆ ಮಾಡಿದೆ. ಅನಿಲ್ ಕಾಳಪ್ಪ ಅವರಿಗೆ ಸೇರಿದ ಶ್ವಾನ ಇದಾಗಿದ್ದು, ಶ್ವಾನದಿಂದಾಗಿ ಕೊನೆಗೂ ಕಂದಮ್ಮ ಹೆತ್ತಮ್ಮನ ಮಡಿಲು ಸೇರಿದೆ. ಮಗು ಸುನನ್ಯ ಜೇನುಕುರುಬ ಸಮುದಾಯದ ಸುನಿಲ್-ನಾಗಿಣಿ ದಂಪತಿಯ ಪುತ್ರಿಯಾಗಿದ್ದಾಳೆ.



