ತಮಿಳುನಾಡಿನ ಕೊಡೈಕೆನಾಲ್ ವಿಲ್ಪಟ್ಟಿ ಪಂಚಾಯತ್ನಲ್ಲಿ ಬಂಗಲೆ ನಿರ್ಮಿಸಲು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡ ಆರೋಪ ಬಹುಭಾಷಾ ನಟ ಪ್ರಕಾಶ್ ರಾಜ್ ವಿರುದ್ಧ ಕೇಳಿ ಬಂದಿದೆ.

ಹೀಗಾಗಿ ಈ ಸಂಬಂಧ ವಿವರಣೆ ನೀಡಿ ಎಂದು ಪ್ರಕಾಶ್ ರಾಜ್ಗೆ ಕೊಡೈಕೆನಾಲ್ ವಲಯ ಉಪ ಬ್ಲಾಕ್ ಡೆವಲಪ್ಮೆಂಟ್ ಅಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ. ಸದ್ಯ ತನ್ನ ಮೇಲಿನ ಆರೋಪಕ್ಕೆ ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರೋ ನಟ ಪ್ರಕಾಶ್ ರಾಜ್, ಆಪಾದಿಸಿದವರು ಆಪಾದನೆ ಮಾಡಿದ್ದಾರೆ. ವಿವರಣೆ ಕೇಳಲೇಬೇಕಾದ ಅಧಿಕಾರಿಗಳು ವಿವರಣೆ ಕೇಳಿದ್ದಾರೆ. ನನ್ನ ಬಳಿ ಇರೋ ಅಧಿಕೃತ ದಾಖಲೆ ಪತ್ರಗಳನ್ನು ಕೊಟ್ಟಿದ್ದೇನೆ. ನಿಜ ಗೊತ್ತಾಗಲಿ, ಸ್ವಲ್ಪ ಕಾಯಿರಿ ಎಂದು ತನ್ನನ್ನು ಟ್ರೋಲ್ ಮಾಡಿದವರಿಗೆ ಸ್ಪಷ್ಟನೆ ನೀಡಿದ್ದಾರೆ.
ಭಾರತೀಪುರಂ ಅಣ್ಣಾನಗರ ಗ್ರಾಮದಲ್ಲಿ ಪ್ರಕಾಶ್ ರಾಜ್ಗೆ ಪಟ್ಟಾ ಜಮೀನು ಇದೆ. ಪಂಚಾಯಿತಿಯಿಂದ ಅನುಮತಿ ಪಡೆಯದೆ ಬಂಗಲೆ ನಿರ್ಮಿಸಿದ್ದಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಪೇತುಪರೈ ಗ್ರಾಮದ ಅಧ್ಯಕ್ಷ ಕೆ.ವಿ ಮಹೇಂದ್ರನ್ ಎಂಬುವರು ಪ್ರಕಾಶ್ ರಾಜ್ ವಿರುದ್ಧ ಈ ಆರೋಪ ಮಾಡಿದ್ದಾರೆ. ಬಂಗಲೆ ನಿರ್ಮಿಸಲು ಪೇತುಪರೈ ಮತ್ತು ಭಾರತಿಪುರಂ ಅಣ್ಣಾನಗರ ಬಳಿಯ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಕೂಡ ಪಡೆದಿಲ್ಲ. ಸಾರ್ವಜನಿಕ ರಸ್ತೆ ಅತಿಕ್ರಮಿಸಿ ಬಂಗೆಲೆ ನಿರ್ಮಿಸಿದ್ದಲ್ಲದೇ ಯಾರಿಗೂ ಓಡಾಟ ನಡೆಸಲು ಅವಕಾಶ ನೀಡಿಲ್ಲ ಎಂದು ದೂರಲಾಗಿದೆ.
 
								



