ಪುತ್ತೂರು: ಪುತ್ತೂರು ಕಾಂಗ್ರೆಸ್ ನ ಹಿರಿಯ ನಾಯಕ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷರು, ದೇವತಾ ಸಮಿತಿ ಯ ಅಧ್ಯಕ್ಷರು ಎನ್ ಸುಧಾಕರ್ ಶೆಟ್ಟಿಯವರು ಸೆ.10ರಂದು ರಾತ್ರಿ ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ನಿಧನರಾದರು.
ಮೃತ ದೇಹವನ್ನು ಇಂದು ಪುತ್ತೂರು ನೆಲ್ಲಿಕಟ್ಟೆಯಲ್ಲಿರುವ ನಿವಾಸಕ್ಕೆ ತರಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.
ಇತ್ತೀಚೆಗೆ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಗೀತಾ, ಪುತ್ರರಾದ ಅಭಿಷೇಕ್ ಮತ್ತು ಅಭಿಜೀತ್ ಅವರನ್ನು ಅಗಲಿದ್ದು, ಇಬ್ಬರೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.
44 ವರ್ಷಗಳಿಂದ ದೇವತಾ ಸಮಿತಿ ಅಧ್ಯಕ್ಷರಾಗಿ ಸೇವೆ:
ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿಯ ಆಶ್ರಯದಲ್ಲಿ ಆಚರಿಸಿಕೊಂಡು ಬರುತ್ತಿರುವ ಸಾರ್ವಜನಿಕ ಶ್ರೀ
ಮಹಾಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ 44 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. 1957ರಲ್ಲಿ
ದಿ. ಹನುಮಂತ ಮಲ್ಯ ಅವರು ಕಿಲೆ ಮೈದಾನದಲ್ಲಿ ಮಹಾಗಣೇಶೋತ್ಸವ ಆರಂಭಿಸಿದ್ದರು. ಅವರ ಬಳಿಕ ಕಳೆದ
44 ವರ್ಷಗಳಿಂದ ಎನ್.ಸುಧಾಕರ್ ಶೆಟ್ಟಿಯವರು ಅದರ ನೇತೃತ್ವ ವಹಿಸಿ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಪ್ರಸ್ತುತ ಕಿಲ್ಲೆ ಮೈದಾನದಲ್ಲಿ 66ನೇ ವರ್ಷದ ಗಣೇಶೋತ್ಸವ ನಡೆಯುತ್ತಿದ್ದು 60ನೇ ವರ್ಷದಲ್ಲಿ ಸುಧಾಕರ
ಶೆಟ್ಟಿಯವರ ನೇತೃತ್ವದಲ್ಲಿ ನಿರಂತರ 9 ದಿನಗಳ ಕಾಲ ಕಾರ್ಯಕ್ರಮ ನಡೆಸಲಾಗಿತ್ತು. ಬಳಿಕದ ದಿನಗಳಲ್ಲಿ
ನಿರಂತರ 7 ದಿನ ಕಾರ್ಯಕ್ರಮ ನಡೆಸುತ್ತಾ ಬರಲಾಗುತ್ತಿದೆ. ಕಿಲ್ಲೇ ಮೈದಾನದ ಗಣಪತಿಯು ವರ್ಣ, ಜಾತಿ, ಮತ
ಹಾಗೂ ಧರ್ಮ ಬೇಧವಿಲ್ಲದೆ ನಡೆಯುತ್ತಿರುವ ಸಾರ್ವಜನಿಕ ಮಹೋತ್ಸವ ಎಂಬುದಾಗಿ ಹೇಳಲು
ಹೆಮ್ಮೆಯಾಗುತ್ತದೆ ಎಂದು ಸುಧಾಕರ್ ಶೆಟ್ಟಿಯವರೇ ಹೇಳಿಕೊಂಡಿದ್ದರು.
ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಸೇವೆ:
ಎನ್.ಸುಧಾಕರ್ ಶೆಟ್ಟಿಯವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶ ಸಮಿತಿಯ
ಉಪಾಧ್ಯಕ್ಷರಾಗಿ, ಬ್ರಹ್ಮರಥ ಸಮರ್ಪಣಾ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ, ಬಳಿಕ ಶ್ರೀ ಮಹಾಲಿಂಗೇಶ್ವರ
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿಯೂ ಹಲವು ವರ್ಷ ದೇವರ ಸೇವೆ ಮಾಡಿದರು. ಅವರ
ಅವಧಿಯಲ್ಲಿ ದೇವಳದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಮೊದಲ ಬಾರಿಗೆ ದೇವಸ್ಥಾನದ
ಬಾಲಗಣಪತಿಗೆ ಮೂಡಪ್ಪ ಸೇವೆ ಮಾಡಿಸಿದರು. ದೇವಳದ ಪೂರ್ವ ದ್ವಾರದ ಗೋಪುರ ರಚನ ಮಾಡಿದರು.
ಸ್ವರ್ಣಲೇಪಿತ ಧ್ವಜಸ್ತಂಭ ಮಾಡಿಸಿದರು. ದೇವರಿಗೆ ಸೇವೆ ನೀಡುವ ಭಕ್ತರ ಮನಸಂಕಲ್ಪದಂತೆ ಅರ್ಚಕರ
ಮೂಲಕ ಸಂಕಲ್ಪ ಕಾರ್ಯ ಆರಂಭಿಸಿದ್ದರು. ದೇವಳದ ಗರ್ಭಗುಡಿಯಲ್ಲಿ ಕಾರ್ತಿಕ ಪೂಜೆ ಸಂದರ್ಭ ನಿಂತು
ಹೋಗಿದ್ದ `ದಳಿ’ಯನ್ನು ಮತ್ತೆ ಹೊಸ ದಳಿಯನ್ನು ಆರಂಭಿಸುವ ಮೂಲಕ ದೇವರಿಗೆ ನಿತ್ಯ ಬೆಳಕಿನ ಸೇವೆ
ನೀಡಿದರು. ಇವೆಲ್ಲದರ ನಡುವೆ ದೇವರ ಮೇಲೆ ಅಪಾರ ಭಕ್ತಿಯಿಟ್ಟಿದ್ದ ಅವರು ಪ್ರತಿ ದಿನ ಬೆಳಿಗ್ಗೆ ದೇವಳಕ್ಕೆ
ಬರುತ್ತಿದ್ದರು. ಧನುರ್ಮಾಸ ಪೂಜೆ ಸಂದರ್ಭವೂ ಬೆಳಗ್ಗೆ, ದೇವಸ್ಥಾನಕ್ಕೆ ಆಗಮಿಸುತ್ತಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ 10 ವರ್ಷ:
10 ವರ್ಷ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದರು. ಅಲ್ಲದೇ 2 ಬಾರಿ ಪುತ್ತೂರು
ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ವಿದ್ಯಾರ್ಥಿಯಾಗಿದ್ದಾಲೇ
ರಾಜಕೀಯದೆಡೆಗೆ ಆಸಕ್ತಿ ಬೆಳೆಸಿಕೊಂಡಿದ್ದ ಅವರು ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಥಮ ವಿದ್ಯಾರ್ಥಿ
ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕ್ರಿಕೆಟ್ ಆಟಗಾರರಾಗಿದ್ದ ಅವರು
ಎನ್.ಎಸ್.ಯು.ಐ ಘಟಕದ ಅಧ್ಯಕ್ಷರಾಗಿ, ಬಳಿಕ ರಾಜಕೀಯ ಪ್ರವೇಶ ಮಾಡಿ ಯುವ ಕಾಂಗ್ರೆಸ್
ಅಧ್ಯಕ್ಷರಾಗಿದ್ದರು. ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯ ಸಂಚಾಲಕರಾಗಿದ್ದರು. ಸಾಮಾಜಿಕ,
ಧಾರ್ಮಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದರು.
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ್ಯರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್ನಲ್ಲಿ ಖಾಸಗಿ ಬಸ್ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…