ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮೃತರಾದ ಮಂಜುನಾಥ ರಾವ್ ಪಾರ್ಥಿವ ಶರೀರ ಶಿವಮೊಗ್ಗದ ತಮ್ಮ ಸ್ವ ಗ್ರಾಮಕ್ಕೆ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

ಪಾರ್ಥಿವ ಶರೀರ ಶಿವಮೊಗ್ಗದ ಎಂ.ಆರ್.ಎಸ್.ವೃತ್ತಕ್ಕೆ ಬರುತ್ತಿದ್ದಂತೆಯೇ ಹಿಂದೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಬರಮಾಡಿಕೊಂಡರು. ಮೃತ ಮಂಜುನಾಥ ಮನೆಯ ಎದುರು ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ.
‘ಭಾರತ ಮಾತೆಗೆ ಹೂ ಹಾಕಿ, ಪಾಕಿಸ್ತಾನಕ್ಕೆ ಬಾಂಬ್ ಹಾಕಿ’ ಎನ್ನುವ ಘೋಷಣೆ ಕೂಗುತ್ತಾ, ಜೆಸಿಬಿಯ ಮುಂಭಾಗ ಉಗ್ರರ ಪ್ರತಿಕೃತಿ ತೂಗುಹಾಕಿ ರ್ಯಾಲಿ ನಡೆಸಿ, ಪಾಕಿಸ್ತಾನ ವಿರುದ್ಧ ಆಕ್ರೋಶ ಹೊರಹಾಕಿದರು.
ಬಿ.ಎಚ್.ರಸ್ತೆಯ ಮೂಲಕ ಸಾಗಿದ ಆಂಬುಲೆನ್ಸ್ ಮೂಲಕ ಸಾಗಿ ಬೆಕ್ಕಿನಕಲ್ಮಠ, ಮೀನಾಕ್ಷಿ ಭವನ, ಅಮಿರ್ ಅಹ್ಮದ್ ವೃತ್ತ ಮೂಲಕ ಮುಖ್ಯ ಬಸ್ ನಿಲ್ದಾಣದಿಂದ ಸಾಗರ ರಸ್ತೆಯ ಸರ್ಕಿಟ್ ಹೌಸ್, ಆಯನೂರು ಗೇಟ್ ಮೂಲಕ ವಿಜಯ ನಗರ ಬಡಾವಣೆಯ ನೇತಾಜಿ ವೃತ್ತ ಸಮೀಪದ ಮನೆಗೆ ಪಾರ್ಥಿವ ಶರೀರ ತಲುಪಿತು. ದಾರಿ ಉದ್ದಕ್ಕೂ ಸಾವಿರಾರು ಜನರು ಸೇರಿದ್ದರು. ಮಂಜುನಾಥ ರಾವ್ ನಿಧನಕ್ಕೆ ಕಂಬನಿ ಮಿಡಿದರು. ನಗರದಾದ್ಯಂತ ಅಂಗಡಿ–ಮುಗ್ಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲಾಗಿತ್ತು.



