ಕಡಬ ತಾಲೂಕು ಕೊಯಿಲ ಮತ್ತು ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕ ರಸ್ತೆಯುದ್ದಕ್ಕೂ ಉಂಟಾಗಿರುವ ಹೊಂಡಗಳಿಗೆ ಸ್ಥಳಿಯರು ಶ್ರಮ ಸೇವೆ ಮೂಲಕ ಮಣ್ಣು ಜಲ್ಲಿಕಲ್ಲುಗಳನ್ನು ತುಂಬಿಸಿ ಸಂಚಾರ ಅನುಕೂಲ ಮಾಡಿ ಮಾದರಿ ಕಾರ್ಯ ಮಾಡಿದ್ದಾರೆ.

ಈ ರಸ್ತೆಯ ಗೋಳಿತ್ತಡಿಯಿಂದ ತ್ರೀವೇಣಿ ಸರ್ಕಲ್ ತನಕದ ಸುಮಾರು 2.5 ಕಿಮೀ ದೂರದ ತನಕ ಹೆಚ್ಚು ಹೊಂಡಗಳು ನಿರ್ಮಾಣವಾಗಿ ಸಂಚಾರ ಅಯೋಗ್ಯವಾಗಿತ್ತು. ಹೀಗಾಗಿ ಕೊಯಿಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಿದಾನಂದ ಪಾನ್ಯಾಲು ಮುಂದಾಳುತ್ವದಲ್ಲಿ ರಸ್ತೆ ದುರಸ್ತಿಗಾಗಿ ವಾಟ್ಸ್ ಆಪ್ ಗ್ರೂಪ್ ರಚಿಸಿ ಆರ್ಥಿಕ ಸಹಾಯ ನೀಡುವಂತೆ ಯಾಚಿಸಲಾಗಿತ್ತು. ಹಲವು ದಾನಿಗಳ ಹಣ ಸೇರಿದಂತೆ ಇನ್ನಿತರ ರೂಪದಲ್ಲಿ ಸಹಾಯ ಮಾಡಿದ್ದಾರೆ. ಕಳೆದ ಬುಧವಾರ ಯಂತ್ರದ ಮೂಲಕ ರಸ್ತೆ ಇಕ್ಕೆಡೆಗಳಲ್ಲಿದ್ದ ಪೊದರು, ಮರಗಳ ತೆರವು, ಚರಂಡಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಭಾನುವಾರದ ತನಕ ಮುಂದುವರಿದಿತ್ತು. ಜೊತೆಗೆ ಭಾನುವಾರ ಸ್ಥಳಿಯರು ಶ್ರಮ ಸೇವೆಯ ಮೂಲಕ ಹೊಂಡ ಮುಚ್ಚುವ ಕಾರ್ಯ ನಡೆಸಿದ್ದಾರೆ. ಬೆಳಿಗ್ಗೆಯಿಂದ ಆರಂಭವಾದ ಶ್ರಮದಾನ ಸಂಜೆಯವರೆಗೂ ಸಾಗಿತ್ತು.



