ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದಲ್ಲಿ ಸರ್ವೀಸ್ ರಸ್ತೆ ಹೊಂಡಗುಂಡಿಗಳಿಂದ ತುಂಬಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪ ವ್ಯಕ್ತಪಡಿಸಿದ್ದಾರೆ.

ಹೆದ್ದಾರಿ ಕಾಮಗಾರಿಯ ವೇಳೆ ಅಗೆದಿರುವ ರಸ್ತೆಗೆ ಕಾಂಕ್ರೀಟ್ ಹಾಕದೆ ಇರುವ ಕಾರಣದಿಂದ ಮಳೆಗಾಲ ಆರಂಭದಲ್ಲೇ ಬೃಹತ್ ಗಾತ್ರದ ಹೊಂಡಗುಂಡಿಗಳಲ್ಲಿ ಕೆಸರು ನೀರು ತುಂಬಿದೆ. ಹೊಂಡದಲ್ಲಿ ಬಿದ್ದ ವಾಹನಗಳು ಮತ್ತೆ ಎದ್ದೇಳಲು ಸಾಧ್ಯವಾಗದೆ ಹರಸಾಹಸ ಪಡುವ ದೃಶ್ಯಗಳು ಕಂಡುಬಂದಿವೆ.

ದ್ವಿಚಕ್ರವಾಹನ ಸವಾರರಂತೂ ರಾತ್ರಿ ವೇಳೆ ಗುಂಡಿಗೆ ಬಿದ್ದು ಪ್ರಾಣಕ್ಕೆ ಅಪಾಯವಾಗುವ ಸಂಭವಗಳು ಜಾಸ್ತಿ ಇವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡು ಕೆಲಸ ನಿರ್ವಹಿಸುವ ಕೆಎನ್ಆರ್ಸಿ ಕಂಪೆನಿಯ ಪ್ರಮುಖರಲ್ಲಿ ಅನೇಕ ಬಾರಿ ಹೇಳಿದರು ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆರೋಪ ಮಾಡಿದ್ದಾರೆ. ಮಳೆಗಾಲವಾದ್ದರಿಂದ ಗುಂಡಿಗಳಿಗೆ ಬಿದ್ದು ಜೀವಕ್ಕೆ ಅಪಾಯವಾಗುವ ಮುನ್ನ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಲು ಸ್ಥಳೀಯರು ಮನವಿ ಮಾಡಿದ್ದಾರೆ.



