ಹಿ0ದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿದ್ದು ಹತ್ಯಾ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ವಾರದ ಹಿಂದೆಯಷ್ಟೇ ಈ ಪ್ರಕರಣವನ್ನು ಕೇಂದ್ರ ಗೃಹ ಇಲಾಖೆ ಎನ್.ಐ.ಎ.ಗೆ ವಹಿಸಿತ್ತು. ಬೆಂಗಳೂರು ಘಟಕದ ಅಧಿಕಾರಿಗಳು ಮಂಗಳೂರಿಗೆ ಬಂದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಡಿ.ವೈ.ಎಸ್.ಪಿ. ಪವನ್ ಕುಮಾರ್ ನೇತೃತ್ವದಲ್ಲಿ ಇಬ್ಬರು ಸಬ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಯನ್ನು ಒಳಗೊಂಡ ತಂಡ ಮಂಗಳೂರು ಸಿ.ಸಿ.ಬಿ. ಮತ್ತು ಇತರ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದೆ. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಹಿಂದೆ ಪಿ.ಎಫ್.ಐ. ಕಾರ್ಯಕರ್ತರು ಇರಬಹುದೆಂಬ ಗುಮಾನಿ ವ್ಯಕ್ತಪಡಿಸಿ ಹಿಂದೂ ಸಂಘಟನೆಗಳು ಎನ್.ಐ.ಎ. ತನಿಖೆಗೆ ಆಗ್ರಹಿಸಿದ್ದವು. ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕೂಡಾ ಈ ಬಗ್ಗೆ ಕೇಂದ್ರ ಸರಕಾರಕ್ಕೆ ಪತ್ರ ಬರೆದು ನಿಷೇಧಿತ ಪಿ.ಎಫ್.ಐ. ಸಂಘಟನೆಯ ಕೈವಾಡ ಇದರ ಹಿಂದೆ ಇರಬಹುದಾದ ಶಂಕೆಯನ್ನು ವ್ಯಕ್ತಪಡಿಸಿ ಎನ್.ಐ.ಎ. ತನಿಖೆಗೆ ಒತ್ತಾಯಿಸಿದ್ರು. ಇತ್ತ ನಿನ್ನೆ ಮಂಗಳೂರಿಗೆ ಬಂದಿದ್ದ ರಾಜ್ಯ ಗೃಹ ಸಚಿವರಾದ ಡಾ. ಪರಮೇಶ್ವರ್ ಎನ್.ಐ.ಎ. ತನಿಖೆ ಕೊಟ್ಟಿದ್ದಾರೆ, ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದಿದ್ದಾರೆ.