ಜನ ಮನದ ನಾಡಿ ಮಿಡಿತ

Advertisement

ಮಳೆಯೆಂಬ ಸೋಜಿಗ

ಕಳೆದ ತಿಂಗಳು ಅಕ್ಕನ ಮದುವೆಯ ಸಲುವಾಗಿ ಮನೆಯಲ್ಲಿದ್ದ ಹಳೆಯವಸ್ತುಗಳನ್ನೆಲ್ಲ ವಿಲೇವಾರಿ ಮಾಡುತ್ತಿದ್ದೆವು. ಹೊರಗಡೆ ಆಗಲೇ ಲೈಟ್ ಆಗಿ ಮಳೆಯೂ ಪ್ರಾರಂಭವಾಗಿತ್ತು . ಹಳೆಯ ವಸ್ತುಗಳನ್ನೆಲ್ಲ ಒಂದು ಗೋಣಿಗೆ ತುಂಬಿಸುತ್ತಿದ್ದ ನನ್ನ ಕಣ್ಣಿಗೆ ಆರನೇ ಕ್ಲಾಸಿನ ನೋಟ್ ಪುಸ್ತಕವೊಂದು ಬಿತ್ತು. ಅದನೊಮ್ಮೆ ಸುಮ್ಮನೆ ಬಿಡಿಸಿದೆ, ಮಳೆಗಾಲದ ಬಗ್ಗೆ ಆರನೇ ಕ್ಲಾಸಿನಲ್ಲಿ ನಾನೇ ಬರೆದ ಪ್ರಬಂಧವೊ0ದು ಓದುವಂತೆ ಒತ್ತಾಯಿಸಿತು.

ಒತ್ತಾಯಕ್ಕೆ ಮಣಿದು ಪರಮಮಿತ್ರ ಒಂದು ಕಪ್ ಟೀ ಜೊತೆ ಓದಲು ಕಿಟಕಿ ಪಕ್ಕ ಬಂದು ನಿಂತೆ. ಕಿಟಕಿಯ ಹೊರಗೆಯು ಮಳೆ, ಓದುವ ಪುಸ್ತಕದೊಳಗೂ ಮಳೆ, ಆಹಾ !! ಅದೇನೋ ಆನಂದ, ವರ್ಣಿಸಲಸಾಧ್ಯ. ಆ ಪ್ರಬಂಧ ಓದಿ ಮುಗಿಸುವಷ್ಟರಲ್ಲಿ ಮಳೆ ನನ್ನೊಳಗೆ ಸಾಕಷ್ಟು ಬದಲಾವಣೆಗಳನ್ನು ಮಾಡಿತ್ತು. ಬಹುಷಃ ಮಳೆ ಕೇವಲ ಪ್ರಕೃತಿಯ ಒಂದು ಸಾಮಾನ್ಯ ಪ್ರಕ್ರಿಯೆಯಲ್ಲ ಅದರೊಳಗೊಂದು ವಿಶೇಷ ಶಕ್ತಿಯಿದೆ. ಬಾನೆತ್ತರದಿಂದ ನೀರಿನ ಹನಿಗಳು ಧರೆಗಪ್ಪಳಿಸುವ ಆ ಸೋಜಿಗದಲ್ಲಿ ಏನೋ ಆನಂದವಿದೆ. ಪ್ರಕೃತಿಯ ಇತರೆ ಪ್ರಕ್ರಿಯೆಗಳಿಗೆ ಹೋಲಿಸಿದರೆ ಮಳೆ ಹೆಚ್ಚು ವಿಶೇಷವೆನಿಸುತ್ತದೆ. ಅದು ಭಾವನೆಗಳಿಗೆ ಸ್ಪಂದಿಸುತ್ತದೆ, ಮನಸಿಗೆ ನಿರಾಳತೆಯ ನೆರಳನ್ನ ಕಲ್ಪಿಸುತ್ತದೆ. ಜಗತ್ತಿನ ಯಾವುದೇ ಸಾಹಿತ್ಯವನ್ನು ತೆಗೆದುಕೊಂಡರು ಕೂಡ ಅದರಲ್ಲಿ ಮಳೆಯನ್ನು ವರ್ಣಿಸಿದಷ್ಟು, ವಿಶ್ಲೇಷಿಸಿದಷ್ಟು ಪ್ರಕೃತಿಯ ಇತರೆ ವಹಿವಾಟುಗಳನ್ನ ವರ್ಣಿಸಿಲ್ಲ. ವಿಶಾಲವಾದ ಕನ್ನಡ ಸಾಹಿತ್ಯವನ್ನೇ ತೆಗೆದುಕೊಂಡರು ಅಲ್ಲಿಯೂ ಕೂಡ ಕುವೆಂಪುರ0ತಹ ಮೇರುಕವಿಗಳು ಮಳೆಯನ್ನು ಎಷ್ಟು ಸೊಗಸಾಗಿ ವರ್ಣಿಸಿದ್ದಾರೆ ಎಂದರೆ ಬೇಸಿಗೆಯಲ್ಲಿ ಅದನ್ನು ಓದಿದರೂ ಮಳೆಗಾಲದ ಭಾವ ನಮ್ಮಲ್ಲಿ ಮೂಡುತ್ತದೆ ಅಲ್ಲದೇ ಮಳೆ ಬಂದ ಅನುಭವವನ್ನೇ ಅದು ಕೊಡುತ್ತದೆ. ಈ ರೀತಿ ಸಾಹಿತ್ಯವಾಗುವ, ಸಾಹಿತ್ಯವಾಗಿ ಓದುಗರನ್ನ ಸೆಳೆಯುವ ಶಕ್ತಿ ಮಳೆಯ ಹೊರತಾಗಿ ಬೇರಾವುದಕ್ಕೂ ಇಲ್ಲ ಅನ್ನಿಸುತ್ತದೆ. ಇಳಿಸಂಜೆಯಲ್ಲಿ ಒಂದು ಕಪ್ ಚಹಾ ಹಿಡಿದು ಬಾಲ್ಕನಿಯಲ್ಲಿ ನಿಂತಾಗ ತಣ್ಣನೆಯ ಮಳೆ ಬಂದರೆ ಅದೆಂತಹ ಒತ್ತಡವಿದ್ದರೂ ಒಂದು ಕ್ಷಣ ಮನಸು ಹಗುರವೆನಿಸಿಬಿಡುತ್ತದೆ. ಇಡೀ ಧರೆಯ ಜೊತೆಗೆ ಮನುಷ್ಯನ ಮನಸ್ಸಿಗೂ ತಂಪೆರೆಯುವ ವಿಶೇಷ ತಾಕತ್ತು ಮಳೆಗಿದೆ.

ಮಳೆ ಎಂದರೆ ಸುಮಾರು ಬಾರಿ ಬಾಲ್ಯವೇ ನೆನಪಾಗುತ್ತದೆ. ಆಗೆಲ್ಲ ಮಳೆಯಲ್ಲಿ ಒದ್ದೆಯಾಗಿ ಆಡುವುದೆಂದರೆ ಏನೋ ಒಂದು ರೀತಿಯ ಕ್ರೇಜ್ ಇರುತಿತ್ತು. ಶಾಲೆ ಆರಂಭವಾಗುವ ಸಮಯಕ್ಕೆ ಸರಿಯಾಗಿ ಮಳೆಗಾಲವೂ ಶುರುವಾಗುತಿತ್ತು. ಕೊಡೆ, ರೈನ್ ಕೋಟ್ ಇದ್ದರೂ ಕೂಡ ಸಂಜೆ ಶಾಲೆಯಿಂದ ಸ್ನೇಹಿತರ ಜೊತೆಗೆ ಮಳೆಯಲ್ಲಿ ಒದ್ದೆಯಾಗಿಕೊಂಡು ಬಂದು ಅಮ್ಮನ ಬಾಯಿಂದ ಕೇಳುತ್ತಿದ್ದ ಬೈಗುಳುಗಳನಂತೂ ಮರೆಯಲು ಸಾಧ್ಯವೇ ಇಲ್ಲ. ಬಹುಷಃ ಮಳೆ ಒಂದು ಸೋಜಿಗದಂತೆ ಕಾಣುವುದು ಬಾಲ್ಯದಲ್ಲಿಯೇ ಅನ್ನಿಸುತ್ತದೆ. ಬದಲಾಗುವ ಕಾಲಮಾನಗಳ ಪೈಕಿ ಮಳೆಗಾಲ ನಮ್ಮ ನೆನಪಿನಲ್ಲಿ ಉಳಿದಷ್ಟು ಬೇರಾವುದು ಉಳಿಯುವುದಿಲ್ಲ. ನೆನಪಾಗಿ ಉಳಿಯುವ ಮತ್ತು ನೆನಪುಗಳನ್ನು ಮೆಲುಕು ಹಾಕುವ ವಿಶೇಷ ಗುಣವನ್ನು ಮಳೆ ಮೈಗೂಡಿಸಿಕೊಂಡಿದೆ. ಕೆಲವು ಬಾರಿ ಈ ಮಳೆ ಅತಿಯಾಗಿ ಸುರಿದು ಸಾಕಷ್ಟು ಪ್ರಾಣಹಾನಿಗೆ ಕಾರಣವಾಗಿ ನಮ್ಮೊಳಗೆ ಭಯವನ್ನೂ ಕೂಡ ಹುಟ್ಟಿಸಿದೆ. ಕೆಲವೊಮ್ಮೆ ಮಿತವಾಗಿ ಸುರಿದು ನಮ್ಮೊಳಗಿನ ಉಲ್ಲಾಸವನ್ನು ಹೆಚ್ಚಿಸಿದೆ. ಈ ಮೂಲಕ ಅದು ಕೂಡ ಮನುಷ್ಯನನ್ನೇ ಹೋಲುತ್ತದೆ. ಯಾವ ರೀತಿ ಮನುಷ್ಯನಲ್ಲಿ ಒಳ್ಳೆಯದು ಕೆಟ್ಟದು ಎರಡೂ ತುಂಬಿಕೊ0ಡಿದೆಯೋ ಅದೇ ರೀತಿ ಮಳೆಯೂ ಕೂಡ ಮೃದುತ್ವದ ಗುಣ ಮತ್ತು ಆರ್ಭಟಿಸುವ ಗುಣ ಎರಡನ್ನೂ ಹೊಂದಿದೆ.

ಮಳೆ ಎಲ್ಲರಿಗೂ ಒಂದೇ ರೀತಿ ಕಾಣೋದಿಲ್ಲ. ಹಲವರು ಮಳೆಯ ಗುಣಗಾನ ಮಾಡಿದರೆ ಕೆಲವರು ಅದಕ್ಕೆ ಹಿಡಿಶಾಪ ಹಾಕುವವರು ಕೂಡ ಇದ್ದಾರೆ. ಎಲ್ಲವೂ ಅವರವರ ಸಂಧರ್ಭಕ್ಕೆ ಅನುಗುಣವಾಗಿರುತ್ತದೆಯಷ್ಟೇ. ಶಾಲೆಗೆ, ಕೆಲಸಕ್ಕೆ ಹೊರಡುವ ಸಂಧರ್ಭದಲ್ಲಿ ಮಳೆ ಬಂದರೆ ಕೆಲವೊಮ್ಮೆ ಕಿರಿಕಿರಿ ಎನಿಸುತ್ತದೆ. ಅದೇ ಯಾವುದೋ ಒಂದು ಸಿನಿಮಾ ಚಿತ್ರೀಕರಣಕ್ಕೆ ನೈಸರ್ಗಿಕ ಮಳೆಯ ಅಗತ್ಯವಿರುತ್ತದೆ, ಆಗ ಮಳೆ ಸುರಿದರಂತೂ ಒಂದು ಕ್ಷಣ ಅವರಿಗೆ ಸ್ವರ್ಗವೇ ಧರೆಗಿಳಿದಂತಾಗುವುದರಲ್ಲಿ ಎರಡು ಮಾತಿಲ್ಲ. ಈಗಂತೂ ಅನಿರೀಕ್ಷಿತವಾಗಿ ಸುರಿಯುವ ಮಳೆ ಹೆಚ್ಚಿನ ಬಾರಿ ಕಿರಿಕಿರಿಯೇ ಅನ್ನಿಸುತ್ತದೆ. ಪ್ರಕೃತಿಯ ಮೇಲಿನ ನಿರಂತರ ದೌರ್ಜನ್ಯದ ಪರಿಣಾಮವಾಗಿಯೋ ಏನೋ ಮಳೆ ಆಗಿಂದಾಗ ಅತಿಯಾಗಿ ಸುರಿದು ನೂರಾರು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿದೆ. ಕಾಡುಗಳ ನಾಶ, ನೀರಿನ ಮೂಲಗಳ ನಾಶ ಹೀಗೆ ವಿವಿಧ ಕಾರಣಗಳಿಂದ ಮಳೆಯ ಪ್ರಕ್ರಿಯೆಯಲ್ಲಿ ಸಾಕಷ್ಟು ದೋಷಗಳು ಕಂಡುಬರುತ್ತಿದೆ.

ಮಳೆಯನ್ನು ಒಬ್ಬ ಸಾಹಿತಿ ಆಸ್ವಾದಿಸುವ ಬಗೆಗೂ ಒಬ್ಬಳು ಮುರುಕು ಗುಡಿಸಿಲಿನಲ್ಲಿರುವ ಅಜ್ಜಿಗೆ ಮಳೆ ಕಾಣುವ ಬಗೆಗೂ ಅಜಗಜಾಂತರ ವತ್ಯಾಸವಿದೆ. ಸಾಹಿತಿಯದ್ದು ಮಳೆ ಸುರಿಯಲಿ ಎಂಬ ಪ್ರಾರ್ಥನೆ, ಆ ಅಜ್ಜಿಯದ್ದು ಮಳೆ ಬಂದರೆ ನೀರು ಗುಡಿಸಲು ಹೊಕ್ಕುತ್ತದೆ ಎಂಬ ಆತಂಕ. ಮಳೆ ಒಂದೇ ಆದರೆ ಅದು ಚಿಮ್ಮಿಸುವ ಭಾವನೆಗಳು ನೂರಾರು. ಮಳೆ ತಾನೇ ಬರುತ್ತೆ ಹೋಗತ್ತೆ ಅನ್ನುವವನಿಗೆ ಮಳೆ ಕೇವಲ ಮಳೆಯಾಗೆ ಉಳಿಯುತ್ತದೆ. ಅದೇ ಮಳೆ ನೋಡಿ ಒಬ್ಬನ ಭಾವನೆಗಳು ಏರಿಳಿತವಾದರೆ ಆತನಿಗೆ ಮಳೆಯೊಂದು ಸೋಜಿಗದಂತೆ ಕಾಣುವುದರಲ್ಲಿ ಅನುಮಾನವಿಲ್ಲ. ಭುವಿಯ ನೀರು ಆವಿಯಾಗಿ ಮೋಡ ಸೇರುತ್ತದೆಯಂತೆ, ಆ ಮೋಡಗಳೆಲ್ಲ ಕರಗಿ ಮತ್ತೆ ಮಳೆಯಾಗಿ ಭೂಮಿ ಸೇರುತ್ತದೆಯಂತೆ. ಆಹಾ!! ಮಳೆಯ ಈ ಪ್ರಕ್ರಿಯೆಯ ಒಂದು ರೀತಿ ವಿಶೇಷ ಅಲ್ವಾ?. ಅದು ವಿಜ್ಞಾನವೋ ಅಥವಾ ದೇವರ ಸೃಷ್ಟಿಯ ಚಮತ್ಕಾರವೋ ಗೊತ್ತಿಲ್ಲ.ಮಳೆ ಕೇವಲ ಮಳೆಯಲ್ಲ,ಅದೊಂದು ನಿರಾಕಾರವಾದ ಶಕ್ತಿ,ಕಣ್ಣಿಗೆ ಕಾಣುವ ಸೋಜಿಗವೇ ಸರಿ.

                                                                                                                                                                                                                                                                                      ಚೇತನ್ ಕಾಶಿಪಟ್ನ

Leave a Reply

Your email address will not be published. Required fields are marked *

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

ಮಂಗಳೂರು: ಅಕ್ರಮ ಆನೆದಂತಗಳ ಮಾರಾಟ; ಆರೋಪಿಗಳ ಬಂಧನ..!

ಬೆಂಗಳೂರು: ಕಾರ್ಕಳದಲ್ಲಿ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ..!

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿ…!

error: Content is protected !!