ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಪ್ರದೇಶದಲ್ಲಿ ಇಬ್ಬರು ಯುವಕರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕೊಲ್ಲಮೊಗ್ರು ಗ್ರಾಮದ ಸುಜಿತ್ ಹಾಗೂ ಗೋಪಾಲ್ ನಾಯರ್ ಅವರ ಪುತ್ರ ಹರಿಪ್ರಸಾದ್ ಎಂದು ಗುರುತಿಸಲಾಗಿದೆ.

ಸುಜಿತ್ ಹಾಗೂ ಹರಿಪ್ರಸಾದ್ ತಮ್ಮ ಇತರ ಸ್ನೇಹಿತರೊಂದಿಗೆ ನದಿದಡಕ್ಕೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸಾರ್ವಜನಿಕರಿಂದ ದೊರೆತ ಮಾಹಿತಿಯಂತೆ, ಸುಜಿತ್ ನೀರಿಗೆ ಇಳಿದು ಈಜಾಟಕ್ಕೆ ಪ್ರಯತ್ನಿಸಿದ ವೇಳೆ ಈಜು ಬಾರದೇ ನೀರಿನ ಆಳಕ್ಕೆ ಸಿಲುಕಿದ್ದಾನೆ. ಸುಜಿತ್ ಮುಳುಗುತ್ತಿರುವುದನ್ನು ಕಂಡ ಹರಿಪ್ರಸಾದ್ ಅವನನ್ನು ರಕ್ಷಿಸಲು ನೀರಿಗೆ ಇಳಿದರೂ, ಇಬ್ಬರೂ ನೀರಿನ ಒಳಗೆ ಸಿಲುಕಿ ಮೃತಪಟ್ಟಿದ್ದಾರೆ. ಮಾಹಿತಿ ದೊರಕುತ್ತಿದ್ದಂತೆಯೇ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಇಬ್ಬರ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಕೈಗೊಂಡಿದ್ದಾರೆ. ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.



