ಕಡಬ :ಕಾಲೇಜಿನ ಮೂವರು ವಿದ್ಯಾರ್ಥಿನಿಯರಿಗೆ ಕೇರಳದ ಯುವಕನೊಬ್ಬ ಆ್ಯಸಿಡ್ ಎರಚಿದ ಘಟನೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಡಬ ಶಾಖೆಯ ವತಿಯಿಂದ ಕಡಬ ಮುಖ್ಯ ರಸ್ತೆಯ ಜಂಕ್ಷನ್ನಲ್ಲಿ ಮಂಗಳವಾರ ಸಂಜೆ ಪ್ರತಿಭಟನೆ ನಡೆಯಿತು.

ಎಬಿವಿಪಿಯ ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಶ್ರೀರಾಂ ಅಂಗಿರಸ ಮಾತನಾಡಿ, ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಎಸಗಿರುವುದು ಅತ್ಯಂತ ಅಮಾನುಷವಾಗಿದೆ. ಯಾವ ಆರೋಪಿ ತನ್ನ ವಿಕೃತ ಮನಸ್ಥಿತಿಯಿಂದ ಈ ಘಟನೆಯನ್ನು ನಡೆಸಿರುತ್ತಾನೋ ಆತನಿಗೆ ಹಾಗೂ ಆತನಿಗೆ ಸಹಕರಿಸಿದವರಿಗೆ ಕಠಿಣ ಶಿಕ್ಷೆ ನೀಡಬೇಕು, ಈ ಮೂಲಕ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆಯು ಜಿಲ್ಲೆಯ ಎಲ್ಲಾ ಕಾಲೇಜು
ವಿದ್ಯಾರ್ಥಿನಿಯರಿಗೆ ಒಂದು ಸುರಕ್ಷಿತ ವಾತಾವರಣವನ್ನು ನಿರ್ಮಾಣ ಮಾಡಬೇಕು ಎಂದರು.
ಎಬಿವಿಪಿ ಕಾರ್ಯಕರ್ತೆ ಪುಣ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹೇಮಂತ್ ಸುಬ್ರಹ್ಮಣ್ಯ ಸ್ವಾಗತಿಸಿದರು. ಸ್ಫೂಡೆಂಟ್ ಡೆವಲಪ್ಮೆಂಟ್ ಪ್ರಮುಖ್ ಚೈತ್ರಾ ವಂದಿಸಿದರು. ಪ್ರತಿಭಟನೆಯ ಬಳಿಕ ಕಡಬ ತಾಲೂಕು ಕಚೇರಿಗೆ ಮೆರವಣಿಗೆಯಲ್ಲಿ ಕಾರ್ಯಕರ್ತರು ತೆರಳಿ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು, ಉಪ ತಹಸೀಲ್ದಾರ್ ಮನೋಹರ್ ಕೆ.ಟಿ. ಮನವಿ ಸ್ವೀಕರಿಸಿದರು. ಈ ಸಂದರ್ಭ ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ ಎಬಿವಿಪಿ ತಾಲೂಕು ಸಂಚಾಲಕ ಸುಹಾಸ್ ಹಾಗೂ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.



