ತಿರುವೈಲು ಗುತ್ತುವಿನ ‘ದೂಜ’ ಹೆಸರಿನ ಕಂಬಳ ಕೋಣ ಶಾಂಭವಿ ನದಿಗೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ.

ಹಲವಾರು ಬಹುಮಾನಗಳನ್ನು ಗೆದ್ದಿದ್ದ ಈ ಕೋಣದ ಅಕಾಲಿಕ ಸಾವು ಸ್ಥಳೀಯರಲ್ಲಿ ಆಘಾತ ಉಂಟುಮಾಡಿದೆ. ಬಳ್ಕುಂಜೆ ಕಂಬಳದ ರೂವಾರಿ ಮಲ್ಲಿಕಾ ಯಶವಂತ ಶೆಟ್ಟಿ ಆಯೋಜಿಸಿದ್ದ ಕುದಿ ಕಂಬಳದ ವೇಳೆ ಈ ದುರಂತ ಸಂಭವಿಸಿದೆ. ಓಟದ ಮಧ್ಯೆ ನಿಯಂತ್ರಣ ತಪ್ಪಿದ ಕೋಣಗಳು ತೋಟದ ನಡುವೆ ಏರ್ರಾಬಿರ್ರಿಯಾಗಿ ಓಡಿ, ಜುಮಾದಿ ದೈವಸ್ಥಾನದ ಬಳಿ ಕ್ಷಣಕಾಲ ನಿಂತು ಬಳಿಕ ಶಾಂಭವಿ ನದಿಗೆ ಹಾರಿದವು. ಈ ವೇಳೆ ‘ದೂಜ’ ಪ್ರಾಣ ಕಳೆದುಕೊಂಡರೆ, ಜೊತೆಯಲ್ಲಿದ್ದ ಇನ್ನೊಂದು ಕೋಣ ಪಾರಾಗಿದೆ. ಈ ಘಟನೆಗೆ ಸಂಬಂಧಿಸಿ ಸ್ಥಳೀಯರಲ್ಲಿ ವಿಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿ ದೈವದ ಮುನಿಸು ಕುರಿತ ಮಾತುಗಳು ಕೂಡ ಹರಿದಾಡುತ್ತಿವೆ. ಕಂಬಳ ಪ್ರೇಮಿಗಳು ‘ದೂಜ’ನನ್ನು ಕಳೆದುಕೊಂಡ ನೋವಿನಲ್ಲಿ ಮುಳುಗಿದ್ದಾರೆ.



