ಬಾವಿಯೊಂದರ ಹೂಳೆತ್ತುವ ಕೆಲಸ ಮುಗಿಸಿ ಮೇಲೆ ಬರುವ ವೇಳೆ ಹಗ್ಗ ಜಾರಿ ಬಿದ್ದು ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಕುರಿಯಾಳದ ಕುಕ್ಕಾಜೆ ಎಂಬಲ್ಲಿ ನಡೆದಿದೆ.

ಕುರಿಯಾಳ ಗ್ರಾಮದ ಕುಕ್ಕಾಜೆ ಕೇಶವ ಪೂಜಾರಿ ಎಂಬವರ ಬಾವಿಯ ಹೂಳೆತ್ತುವುದಕ್ಕೆ ಬಂದ ಬರಿಮಾರು ನಿವಾಸಿಗಳಾದ ಪದ್ಮನಾಭ ಮತ್ತು ರಾಮ ಎಂಬವರು ಬಾವಿಗೆ ಬಿದ್ದಿದ್ದು, ಅದರಲ್ಲಿ ಒರ್ವರ ಕಾಲಿಗೆ ಗಾಯವಾಗಿದೆ.

ಇವರು ಬಾವಿಯ ಹೂಳೆತ್ತುವ ಕೆಲಸ ಮುಗಿಸಿ, ವಾಪಸು ಬಾವಿಯೊಳಗಿನಿಂದ ಮೇಲೆ ಹಗ್ಗ ಹಿಡಿದು ಮೇಲೆಕ್ಕೆ ಬರುತ್ತಿದ್ದ ವೇಳೆ ಹಗ್ಗ ಕಡಿದು ಬಿದ್ದಿದ್ದಾರೆ. ಸುಮಾರು 40 ಅಡಿ ಆಳದ ಬಾವಿ ಇದಾಗಿದ್ದು, ಅರ್ಧಕ್ಕೆ ಬರುತ್ತಿದ್ದಂತೆ ಹಗ್ಗ ಕಡಿದಿದೆ. ಬಾವಿಯೊಳಗೆ ಬಿದ್ದ ಇಬ್ಬರಲ್ಲಿ ಒಬ್ಬರ ಕಾಲಿಗೆ ಸಣ್ಣಪುಟ್ಟ ಗಾಯವಾಗಿದ್ದು ಇನ್ನೊಬ್ಬರು ಯಾವುದೇ ಗಾಯವಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಹಗ್ಗ ಕಡಿದು ಬಾವಿಯೊಳಗೆ ಬಿದ್ದ ಇವರನ್ನು ಸುರಕ್ಷಿತವಾಗಿ ಮೇಲೆತ್ತುವ ಕಾರ್ಯ ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ನಡೆದಿದೆ.



