ಬಣ್ಣದ ಕನಸುಗಳನ್ನು ಹೊತ್ತ ಪುಟಾಣಿಗಳ ಕಣ್ಣುಗಳಲ್ಲಿ ಏನೋ ಒಂದು ಆನಂದ. ಉತ್ತಮ ಕಲಿಕೆ ಉಜ್ವಲ ಭವಿಷ್ಯವೆನ್ನುವ ಧ್ಯೇಯ ವಾಕ್ಯದಡಿಯಲ್ಲಿ ರಾಜ್ಯದ ಎಲ್ಲೆಡೆ ಶಾಲಾ ಶೈಕ್ಷಣಿಕ ವರ್ಷದ ಆರಂಭಕ್ಕೆ ಜೂನ್ 1 ಮುನ್ನುಡಿ ಬರೆಯಿತು.

ಸಂಭ್ರಮದ ಕಲಿಕೆಗೆ ಸ್ವಾಗತಿಸಿದ ಮಂಚಿ – ಕೊಳ್ನಾಡು ಪ್ರೌಢಶಾಲೆಯಲ್ಲಿ ಮಕ್ಕಳದೇ ಕಲರವ. ಇಲ್ಲಿ ಆಯೋಜಿಸಲಾದ ಬಂಟ್ವಾಳ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಮಾಲತಿ ಮಾತನಾಡಿ, “ಮಕ್ಕಳ ಮನದಲ್ಲಿ ಬಿತ್ತಿದ ಉಜ್ವಲ ಭವಿಷ್ಯದ ಅಕ್ಷರ ಬೀಜಗಳು ಹೆಮ್ಮರವಾಗಿ ನಾಡಿಗೆ ಸಂಪನ್ಮೂಲವಾಗಿ ಬೆಳಕಾಗುವುದರಲ್ಲಿ ಸಂಶಯವಿಲ್ಲ. ಪಠ್ಯ ಹಾಗೂ ಸಹಪಠ್ಯದ ಸಮತೋಲಿತ ಕಲಿಕೆ ಮಕ್ಕಳ ಸಂಸ್ಕಾರಯುತ ನಡೆಗೆ ತೆರೆದು ಪ್ರಜ್ಞಾವಂತ ಸಮಾಜದ ಅನಾವರಣಕ್ಕೆ ಕಾರಣವಾಗುತ್ತದೆ ಎಂದರು. ಇವೆಲ್ಲದಕ್ಕೂ ಕಾರಣವಾಗಿರುವ ಸರಕಾರಿ ಕನ್ನಡ ಶಾಲೆಗಳು ಮುಚ್ಚುವ ಭೀತಿಯಲ್ಲಿರುವ ಇಂದಿನ ಕಾಲಘಟ್ಟದಲ್ಲಿ ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಗಮನಾರ್ಹವಾಗಿದೆ. ಶೇಕಡಾ 100 ಫಲಿತಾಂಶದೊಂದಿಗೆ ಶಾಲೆಯ ಶೈಕ್ಷಣಿಕ ಗುಣಮಟ್ಟವು ಜನಮಾನಸದಲ್ಲಿ ಶಾಶ್ವತವಾಗಿದೆ” ಎಂದೂ ಅವರು ಹೇಳಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ರಮೇಶ್ ರಾವ್ ಪತ್ತುಮುಡಿ, ಡಾ. ಗೋಪಾಲ್ ಆಚಾರ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



