ಕಾಸರಗೋಡಿನ ಪ್ರಸಿದ್ಧ ಶ್ರೀ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಪಾರಂಪರಿಕ ಅರ್ಚಕರಾಗಿದ್ದ ವೇಣುಗೋಪಾಲ ಕಲ್ಲೂರಾಯ (78) ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.

ಅವರು ಮಧೂರು ಮೇಲಿನ ಮನೆ ನಿವಾಸಿಯಾಗಿದ್ದರು. ಶನಿವಾರ ಬೆಳಿಗ್ಗೆ ಕುಟುಂಬದವರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಿತು.
ವೇಣುಗೋಪಾಲ ಕಲ್ಲೂರಾಯ ಅವರು ಹಲವು ವರ್ಷಗಳಿಂದ ಮಧೂರು ಕ್ಷೇತ್ರದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿ ಭಕ್ತರ ಅಪಾರ ಗೌರವಕ್ಕೆ ಪಾತ್ರರಾಗಿದ್ದರು. ಧಾರ್ಮಿಕ ಸೇವೆಯೊಂದಿಗೆ ಸಮಾಜಮುಖಿ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದ ಅವರು ಶಿವಳ್ಳಿ ಬ್ರಾಹ್ಮಣ ಸಭೆ ಕಾಸರಗೋಡು ವಲಯ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಸಮಿತಿಯ ಮಾಜಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಸಮುದಾಯದ ಸಂಘಟನೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದರು.
ನಿವೃತ್ತ ಶಿಕ್ಷಕರಾಗಿದ್ದ ಅವರು ಹವ್ಯಾಸಿ ಯಕ್ಷಗಾನ ಕಲಾವಿದ ಹಾಗೂ ಸಂಗೀತ ವಿದ್ವಾಂಸರಾಗಿಯೂ ಹೆಸರುವಾಸಿಯಾಗಿದ್ದರು. ಪೌರೋಹಿತ್ಯ ಕ್ಷೇತ್ರದಲ್ಲಿ ಅಪಾರ ಅನುಭವ ಮತ್ತು ಗೌರವ ಗಳಿಸಿದ್ದ ಅವರು ತಮ್ಮ ಸೇವಾ ಮನೋಭಾವದಿಂದ ಸಮಾಜದಲ್ಲಿ ವಿಶಿಷ್ಟ ಸ್ಥಾನವನ್ನು ಸಂಪಾದಿಸಿದ್ದರು.
ಮೃತರು ಪತ್ನಿ ಕಮಲಾಕ್ಷಿ (ಸೀಮಾ), ಪುತ್ರರಾದ ವಸಂತ ಕಲ್ಲೂರಾಯ (ಮಧೂರು ಕ್ಷೇತ್ರದ ಅರ್ಚಕ) ಹಾಗೂ ಕಿಶೋರ್ (ಹರಿ ಕೇಶವ ಕಲ್ಲೂರಾಯ), ಉಡುಪಿ ಕಾಲೇಜಿನ ಉಪನ್ಯಾಸಕ, ಸೊಸೆ ಕಾವ್ಯಶ್ರೀ, ಸಹೋದರ ಬಾಲಚಂದ್ರ ಕಲ್ಲೂರಾಯ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.



