ಆಟಿ ಅಮಾವಾಸ್ಯೆಯ ಪವಿತ್ರ ದಿನದಂದು ಬಂಟ್ವಾಳ ತಾಲೂಕಿನ ಐತಿಹಾಸಿಕ ಹಾಗೂ ಪೌರಾಣಿಕ ಪ್ರಸಿದ್ಧಿಯ ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲಿ ವಿಶೇಷ ತೀರ್ಥಸ್ನಾನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.

ಆಟಿ ಅಮಾವಾಸ್ಯೆಯ ತೀರ್ಥಸ್ನಾನಕ್ಕೆ ವಿಶೇಷ ಮಹತ್ವವಿದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ನರಹರಿ ಪರ್ವತದತ್ತ ಭಕ್ತರ ದಂಡು ಹರಿದುಬಂತು.

ನಸುಕಿನ ಜಾವದಿಂದಲೇ ಊರು-ಪರವೂರುಗಳಿಂದ ಭಕ್ತರು ಕುಟುಂಬ ಸಮೇತರಾಗಿ ಕ್ಷೇತ್ರಕ್ಕೆ ಆಗಮಿಸಿದರು. ಪರ್ವತದ ಮೇಲಿರುವ ಪವಿತ್ರ ತೀರ್ಥಗಳಲ್ಲಿ ಸ್ನಾನ ಮಾಡಿದ ಬಳಿಕ ಶ್ರೀ ಸದಾಶಿವ ದೇವರ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.
ಬೆಟ್ಟದ ಮೇಲಿರುವ ಪವಿತ್ರ ತೀರ್ಥಗಳ ಪಾವಿತ್ರ್ಯ ಹಾಗೂ ಕ್ಷೇತ್ರದ ಸ್ಥಳಪುರಾಣದ ಹಿನ್ನೆಲೆ ನರಹರಿ ಪರ್ವತದ ಪ್ರಮುಖ ಆಕರ್ಷಣೆಯಾಗಿದ್ದು, ಆಟಿ ಅಮಾವಾಸ್ಯೆಯಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ತೀರ್ಥಸ್ನಾನ ನೆರವೇರಿಸಿದರು.



