ನಗರದ ಕೆಪಿಟಿ ಸಿಗ್ನಲ್ ಸಮೀಪ ರಸ್ತೆಯ ಮಧ್ಯಭಾಗದಲ್ಲೇ ಭಾರೀ ಗುಂಡಿಯೊಂದು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಅಪಾಯ ಎದುರಾಗಿದೆ.

ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಗುಂಡಿಯನ್ನು ತಪ್ಪಿಸಲು ನಿಧಾನವಾಗಿ ಚಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಮಧ್ಯದಲ್ಲೇ ಗುಂಡಿ ಇರುವುದರಿಂದ ಅಪಘಾತದ ಆತಂಕವೂ ಹೆಚ್ಚಾಗಿದೆ.
ಮಳೆ ಸುರಿದ ಸಂದರ್ಭದಲ್ಲಿ ಗುಂಡಿಯಲ್ಲಿ ನೀರು ತುಂಬಿಕೊಳ್ಳುವುದರಿಂದ ವಾಹನ ಸವಾರರಿಗೆ ಗುಂಡಿ ಕಾಣದಂತಾಗುತ್ತಿದೆ. ಪರಿಣಾಮವಾಗಿ ವಾಹನಗಳು ಗುಂಡಿಗೆ ಬಿದ್ದು ಮೇಲೇಳುವಾಗ ಅಕ್ಕಪಕ್ಕದಲ್ಲಿ ಸಂಚರಿಸುವವರಿಗೆ ಕೆಸರು ನೀರಿನ ಸಿಂಚನವಾಗುತ್ತಿದೆ.

ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗುಂಡಿ ಮುಚ್ಚಿದರೆ ಸಂಭಾವ್ಯ ಅಪಘಾತಗಳನ್ನು ತಡೆಗಟ್ಟುವುದರ ಜೊತೆಗೆ ಈ ರಸ್ತೆಯಲ್ಲಿ ಸುಗಮ ಸಂಚಾರಕ್ಕೂ ಅನುಕೂಲವಾಗಲಿದೆ.



