ಈ ಬಾರಿ ಯಕ್ಷಗಾನ ಅಕಾಡೆಮಿ ಘೋಷಿಸಿರುವ ಯಕ್ಷಸಿರಿ ಪ್ರಶಸ್ತಿಗೆ ಬಂಟ್ವಾಳ ತಾಲೂಕಿನ ಕೋಡಪದವು ಕುಕ್ಕಿಲ ನಿವಾಸಿ, ಪರಂಪರೆಯ ಶೈಲಿಯ ಹವ್ಯಾಸಿ ಭಾಗವತೆ ದುರ್ಗಾಪರಮೇಶ್ವರಿ ಕುಕ್ಕಿಲ ಅವರು ಆಯ್ಕೆಯಾಗಿದ್ದಾರೆ.

ಸುಮಾರು 39 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ 55 ವರ್ಷದ ದುರ್ಗಾಪರಮೇಶ್ವರಿ ಕುಕ್ಕಿಲ ಅವರು ಪ್ರಸಿದ್ಧ ಭಾಗವತ ಮಾಂಬಾಡಿ ನಾರಾಯಣ ಭಾಗವತರ ಮೊಮ್ಮಗಳು. ಬಂಟ್ವಾಳ ತಾಲೂಕಿನ ಕೋಡಪದವು ನಿವಾಸಿ ಪ್ರಗತಿಪರ ಕೃಷಿಕ ಪುರಂದರವಿಠಲ ಕುಕ್ಕಿಲ ಅವರ ಪತ್ನಿಯಾಗಿದ್ದಾರೆ.
ಕಾಸರಗೋಡು ಜಿಲ್ಲೆಯ ಬಾಯಾರು ಗ್ರಾಮದ ಕೆರೆಮೂಲೆಯಲ್ಲಿ 1971ರ ಮೇ 30ರಂದು ಕೃಷ್ಣ ಭಟ್ಟ ಮತ್ತು ದ್ರೌಪದಿ ಅಮ್ಮ ದಂಪತಿಯ ಪುತ್ರಿಯಾಗಿ ಜನಿಸಿದ ದುರ್ಗಾಪರಮೇಶ್ವರಿ ಅವರಿಗೆ ಬಾಲ್ಯದಿಂದಲೇ ಯಕ್ಷಗಾನದ ನಂಟು ಬೆಳೆದಿತ್ತು. ಅವರ ಅಜ್ಜ ಮಾಂಬಾಡಿ ನಾರಾಯಣ ಭಾಗವತರು ಪ್ರಸಿದ್ಧ ಯಕ್ಷಗಾನ ಕಲಾವಿದರಾಗಿದ್ದು, ಸೋದರಮಾವ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರೂ ಯಕ್ಷಗಾನ ಹಿಮ್ಮೇಳದ ಗುರುಗಳಾಗಿದ್ದಾರೆ.

ಸಹೋದರರ ಪ್ರೇರಣೆಯಿಂದ ಬಾಲ್ಯದಲ್ಲೇ ಯಕ್ಷಗಾನ ಕಲಿತ ಅವರು, ಅಣ್ಣಂದಿರು ಅಜ್ಜ ಮಾಂಬಾಡಿ ನಾರಾಯಣ ಭಾಗವತರ ಬಳಿ ಹಿಮ್ಮೇಳ ಅಭ್ಯಾಸ ಮಾಡುತ್ತಿದ್ದುದರಿಂದ ಮನೆಯಲ್ಲಿ ಯಕ್ಷಗಾನ ಕಲಿಕೆಗೆ ಉತ್ತಮ ವಾತಾವರಣ ದೊರೆತಿತ್ತು. ಅಣ್ಣ ನಾರಾಯಣ ಭಟ್ ಅವರಿಂದ ಪೂರ್ವರಂಗದ ಪಾಠಗಳನ್ನು ಕಲಿತ ಅವರು 1987ರಲ್ಲಿ ಮೊದಲ ಬಾರಿಗೆ ಬಯಲಾಟದಲ್ಲಿ ಭಾಗವತಿಕೆ ಮಾಡಿದರು.
1993ರಿಂದ ಆಕಾಶವಾಣಿ ಕಲಾವಿದೆಯಾಗಿ ಗುರುತಿಸಿಕೊಂಡಿರುವ ದುರ್ಗಾಪರಮೇಶ್ವರಿ ಕುಕ್ಕಿಲ ಅವರು ಹಲವು ಸಂಘ-ಸಂಸ್ಥೆಗಳ ಯಕ್ಷಗಾನ ಕಾರ್ಯಕ್ರಮಗಳು, ಹವ್ಯಾಸಿ ಆಟಗಳು, ತಾಳಮದ್ದಳೆಗಳು ಹಾಗೂ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಭಾಗವತರಾಗಿ ವೇದಿಕೆಯೇರಿದ್ದಾರೆ. ಅಲ್ಲದೆ, ಬೆಂಗಳೂರು ದೂರದರ್ಶನದಲ್ಲಿಯೂ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಸಲ್ಲಿಸಿರುವ ಸೇವೆ ಹಾಗೂ ಪರಂಪರೆಯ ಶೈಲಿಯ ಭಾಗವತಿಕೆಯ ಸಾಧನೆಗೆ ಯಕ್ಷಸಿರಿ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ ಎಂದು ದುರ್ಗಾಪರಮೇಶ್ವರಿ ಕುಕ್ಕಿಲ ಅವರು ತಿಳಿಸಿದ್ದಾರೆ.



