80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನ್ಯೂ ಫ್ರೆಂಡ್ಸ್ ಕಪ್ಪೆಟ್ಟು ತಂಡದ ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಕಲಾಕೃತಿ ಹಾಗೂ ಪುರಾತನ ಸಂಸತ್ ಭವನದ ಸುಂದರ ಮಾದರಿಯನ್ನು ಕಪ್ಪೆಟ್ಟುವಿನಲ್ಲಿ ನಿರ್ಮಿಸಲಾಗಿದೆ.

ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ತಂಡದ ಸದಸ್ಯರು ಒಗ್ಗೂಡಿ ಈ ಕಲಾಕೃತಿಯನ್ನು ನಿರ್ಮಿಸಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಅಮೂಲ್ಯ ಕೊಡುಗೆಯನ್ನು ಸ್ಮರಿಸುವುದರ ಜೊತೆಗೆ, ಪ್ರಜಾಪ್ರಭುತ್ವದ ಪ್ರತೀಕವಾಗಿರುವ ಸಂಸತ್ ಭವನದ ಮಹತ್ವವನ್ನು ಸಾರುವ ರೀತಿಯಲ್ಲಿ ಮಾದರಿಯನ್ನು ಸಿದ್ಧಪಡಿಸಲಾಗಿದೆ.
ಈ ಕಲಾಕೃತಿ ನಿರ್ಮಾಣದಲ್ಲಿ ತಂಡದ ಸದಸ್ಯರಾದ ಸುಧಾಕರ್, ದಯಾನಂದ, ಹರೀಶ್, ಬಾಲು, ಪ್ರಮೋದ್, ಪ್ರಸಾದ್, ಸುರೇಶ್, ಶಶಾಂಕ್, ಕುಮಾರ್, ಸಂಪ್ರೀತ್, ನಿಹಾಲ್ ಹಾಗೂ ಸೃಜನ್ ಅವರು ಒಗ್ಗಟ್ಟಿನಿಂದ ಶ್ರಮಿಸಿದ್ದಾರೆ.
ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳನ್ನು ಸ್ಮರಿಸುವಂತೆ ಮೂಡಿಬಂದಿರುವ ಈ ಕಲಾಕೃತಿ ಕಪ್ಪೆಟ್ಟುವಿನಲ್ಲಿ ವಿಶೇಷ ಆಕರ್ಷಣೆಯಾಗಿದೆ.



