ಭೀಕರ ರಸ್ತೆ ಅಪಘಾತದಲ್ಲಿ ಅಜ್ಜ ಮತ್ತು ಮೊಮ್ಮಗಳು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕ್ಯಾಸನಕೆರೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಸಂಭವಿಸಿದೆ.

ಮೃತರನ್ನು 55 ವರ್ಷದ ಈಶ್ವರಪ್ಪ ಮತ್ತು ಅವರ 14 ವರ್ಷದ ಮೊಮ್ಮಗಳು ಸೃಷ್ಟಿ ಎಂದು ಗುರುತಿಸಲಾಗಿದೆ. ಈಕೆ ಕೂಡ್ಲಿಗಿ ಪಟ್ಟಣದ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಪರೀಕ್ಷೆ ಮುಗಿಸಿದ ಮೊಮ್ಮಗಳನ್ನು ಅಜ್ಜ ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ರಸ್ತೆಯ ಮೇಲೆ ಒಣಗಿಸಲು ಹಾಕಿದ್ದ ರಾಗಿಯ ಮೇಲೆ ಬೈಕ್ ಚಲಿಸಿದಾಗ ನಿಯಂತ್ರಣ ತಪ್ಪಿ ಜಾರಿ ಬಿದ್ದಿದೆ. ಬೈಕ್ ಸವಾರರು ಕೆಳಗೆ ಬಿದ್ದ ತಕ್ಷಣವೇ ಹಿಂದಿನಿಂದ ಬಂದ ತಮಿಳುನಾಡು ನೋಂದಣಿಯ ಕಂಟೈನರ್ ಲಾರಿ ಇವರ ಮೇಲೆ ಹರಿದಿದ್ದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೂಡ್ಲಿಗಿ ಪಿಎಸ್ಐ, ಸಿಸಿಪಿ ಪರಿಶಿಲನೆ ನಡೆಸಿದ್ದು, ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ



