ಭೂ ವ್ಯವಹಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರ ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದಂತಹ ಭಯಾನಕ ಘಟನೆ ನಿನ್ನೆ (ಮಾ.17)ರಂದು ಮಂಗಳೂರು ನಗರದಲ್ಲಿ ನಡೆದಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಗಾಯಗೊಂಡ ದ್ವಿಚಕ್ರ ವಾಹನ ಸವಾರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲ್ಲಿಕಟ್ಟೆಯ ನಿವಾಸಿ ಮೋಹನ್ ದಾಸ್ ಶೆಟ್ಟಿ (56) ಘಟನೆಯಲ್ಲಿ ಗಾಯಗೊಂಡವರು ಎಂದು ಗುರುತಿಸಲಾಗಿದೆ. ಫಳ್ನೀರ್ ನಿವಾಸಿ ಮಹಮ್ಮದ್ ಶರೀಫ್ (26) ಬಂಧಿತ ಆರೋಪಿಯಾಗಿದ್ದಾನೆ. ಭೂ ವ್ಯವಹಾರಕ್ಕೆ ಸಂಬಂಧಿಸಿ ಆರೋಪಿ ಮಹಮ್ಮದ್ ಶರೀಫ್ ಸುರತ್ಕಲ್ ಕಾನ ವಾಮಂಜೂರಿನಲ್ಲಿ ಸುಮಾರು 2 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದ. ಇದಕ್ಕೆ ಸಂಬಂಧಿಸಿ ಮಲ್ಲಿಕಟ್ಟೆಯ ಮೋಹನ್ ದಾಸ್ ಶೆಟ್ಟಿ ಅವರು ತನಗೆ ಮೋಸ ಮಾಡಿದ್ದಾರೆಂದು ಸಿಟ್ಟಿನಿಂದ ಮಂಗಳವಾರ ಪೂರ್ವಾಹ್ನ 11 ಗಂಟೆ ವೇಳೆಗೆ ಮಂಗಳೂರು ನಗರದ ಆರ್ಯ ಸಮಾಜ ರಸ್ತೆಯ ಬದಿಯಲ್ಲಿ ಮಾತುಕತೆ ನಡೆಸಿದ ಸಂದರ್ಭ ಆರೋಪಿ ಸಿಟ್ಟಿನಲ್ಲಿ ಮೋಹನ್ ದಾಸ್ ಶೆಟ್ಟಿಯ ಮೊಬೈಲನ್ನು ಕಸಿದುಕೊಂಡಿದ್ದ. ಬಳಿಕ ಮೋಹನ್ದಾಸ್ ಶೆಟ್ಟಿ ತನ್ನ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಆರೋಪಿ ಮಹಮ್ಮದ್ ಶರೀಫ್ ತನ್ನ ಕಾರನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆಸಿ ಕೊಲೆ ಮಾಡಲು ಯತ್ನಿಸಿದ್ದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಕದ್ರಿ ಪೊಲೀಸರು ಆರೋಪಿ ಶರೀಫ್ನನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.



