ಮಂಗಳೂರು:
ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ಉಂಟಾಗಿರುವ ಬೆಳವಣಿಗೆಗಳ ವಿರುದ್ಧ ಮಂಗಳೂರಿನ ಮಿನಿ ವಿಧಾನಸೌಧ ಎದುರು ಜಾತ್ಯತೀತ ಜನತಾದಳ ವತಿಯಿಂದ ಪ್ರತಿಭಟನಾ ಸಭೆ ನಡೆಯಿತು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಎಸ್.ಎಲ್. ಬೋಜೆಗೌಡ ಮಾತನಾಡಿ, “ಇದು ಸಾಮಾನ್ಯ ರಾಜಕೀಯ ವಿಚಾರವಲ್ಲ, ದೇಶದ ಅರ್ಧ ಜನಸಂಖ್ಯೆಯ ಹಕ್ಕಿನ ಹೋರಾಟ. ಮಹಿಳಾ ಮೀಸಲಾತಿಯನ್ನು ರಾಜಕೀಯ ಲಾಭಕ್ಕಾಗಿ ತಡೆಹಿಡಿಯುವ ಪ್ರಯತ್ನಗಳು ಅಸಂಗತ ಮತ್ತು ಖಂಡನೀಯ,” ಎಂದು ಹೇಳಿದರು. ಮಹಿಳಾ ಮೀಸಲಾತಿ ಜಾರಿಗಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ಲೋಕಸಭೆಯಲ್ಲಿ ನಡೆದ ಇತ್ತೀಚಿನ ಘಟನೆಗಳನ್ನು ಉಲ್ಲೇಖಿಸಿದ ಅವರು, ಮಹಿಳೆಯರಿಗೆ ನ್ಯಾಯ ನೀಡುವ ವಿಷಯದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಬೆಂಬಲಿಸಬೇಕಾದ ಸಂದರ್ಭದಲ್ಲಿ ವಿರೋಧ ಪಕ್ಷಗಳು ತೋರಿಸುತ್ತಿರುವ ಧೋರಣೆ ಪ್ರಜಾಪ್ರಭುತ್ವದ ಮೂಲ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಕೇಂದ್ರದ ಎನ್ಡಿಎ ಸರ್ಕಾರ ಮಹಿಳಾ ಮೀಸಲಾತಿಯನ್ನು ಕಾನೂನುಬದ್ಧಗೊಳಿಸಲು ಮುಂದಾಗಿದೆ ಎಂದು ತಿಳಿಸಿದ ಅವರು, ಕಾಂಗ್ರೆಸ್ ಪಕ್ಷ ತನ್ನ ಆಡಳಿತಾವಧಿಯಲ್ಲಿ ಈ ವಿಷಯವನ್ನು ಕಡೆಗಣಿಸಿದ್ದು, ಈಗ ಜಾರಿಗೆ ವಿಳಂಬ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.
ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರ ಕಾಲದಲ್ಲೇ 33% ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನಲ್ಲಿ ಮಂಡನೆಯಾಗಿತ್ತು ಎಂಬುದನ್ನು ಸ್ಮರಿಸಿದ ಅವರು, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ ಐತಿಹಾಸಿಕ ನಿರ್ಧಾರವನ್ನು ಕೂಡ ಉಲ್ಲೇಖಿಸಿದರು.
ಪ್ರಸ್ತುತ ಲೋಕಸಭೆಯಲ್ಲಿ ಮಹಿಳೆಯರ ಪ್ರತಿನಿಧಿತ್ವ ಕೇವಲ 14% ಇರುವುದರತ್ತ ಗಮನ ಸೆಳೆದ ಅವರು, 33% ಮೀಸಲಾತಿ ಜಾರಿಗೆ ಬಂದರೆ ಮಹಿಳೆಯರ ರಾಜಕೀಯ ಪಾಲ್ಗೊಳ್ಳುವಿಕೆ ಗಣನೀಯವಾಗಿ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ, ಜನಸಂಖ್ಯೆಗೆ ಅನುಗುಣವಾದ ಪ್ರತಿನಿಧಿತ್ವದ ಅಗತ್ಯವನ್ನು ಒತ್ತಿ ಹೇಳಿದ ಅವರು, ಸಂಸದರು ಪ್ರತಿನಿಧಿಸುವ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲೋಕಸಭಾ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಮತ್ತು ರಾಜ್ಯಾ ಉಪಾದ್ಯಕ್ಷ ಎಂ.ಬಿ. ಸದಾಶಿವ ಅವರು, ಮಹಿಳಾ ಮೀಸಲಾತಿ ಮಸೂದೆಗೆ ತಮ್ಮ ಪಕ್ಷದ ಬಲವಾದ ಬೆಂಬಲವನ್ನು ಪುನರುಚ್ಚರಿಸಿ, ಮಸೂದೆಗೆ ಅಡ್ಡಿಪಡಿಸುವ ಎಲ್ಲ ಪ್ರಯತ್ನಗಳನ್ನು ತೀವ್ರವಾಗಿ ಖಂಡಿಸಿದರು.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಕುಂಇ್ , ಜಿಲ್ಲಾ ಕಾರ್ಯದ್ಯಕ್ಷ ಶಶಿರಾಜ್ ಶೆಟ್ಟಿ ಕೊಳಂಬೆ , ಯುವ ಘಟಕ ಅದ್ಯಕ್ಷ ಅಕ್ಷಿತ್ ಸುವರ್ಣ , ರಾಜ್ಯ ಮೀನುಗಾರ ಘಟಕ ಅದ್ಯಕ್ಷ ರತ್ನಕರ್ ಸುವರ್ಣ , ಜಿಲ್ಲಾ ಮುಖಂಡರುಗಳಾದ ವಸಂತ್ ಪೂಜಾರಿ , ಇಕ್ಬಲ್ ಮುಲ್ಕಿ , ಮಾಜಿ ಜಿ. ಪ. ಸದಸ್ಯ ಅಜೀಜ್ ಮಲಾರ್ ,ಉಮೇಶ್ ವೈ. ಗೌಡ, ರಮೀಜಾ ನಾಸೀರ್ ,ರೀತೆಶ್ , ಮುನೀರ್ ಮುಕ್ಕಚೇರಿ, ಭಾರತಿ, ಪುಷ್ಪರಾಜನ್ , ಪುತ್ತು ಮೋನು , ಇಬ್ರಾಹಿಂ ಜಪ್ಪು , ಅಕ್ಷ ಉಸ್ಮನ್ , ರಘನಾಥ್ ಶೇಟ್ , ವಿನ್ಸಂಟ್ , ಪ್ರಶಾಂತ್ ಭಟ್ ಕಡಬ,ಚೇತನ್ ವೈ ಶೆಟ್ಟಿ , ಚಂದ್ರಕಲಾ , ಜೋತಿ ಲಕ್ಷಿ. ಸರೋಜಿನಿ , ನಿರಂಜನ ಸುನಿಲ್ ,ಚಿತ್ತರಂಜನ್ , ಸ್ಟಾನಿ , ಜಲೀಲ್ ಮತ್ತಿತರ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು ಕಾರ್ಯಕ್ರಮದ ಕೊನೆಗೆ ಮಹಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು ದನ್ಯವಾದ ಅರ್ಪಿಸಿದರು.



